ಕನಕಗಿರಿ | ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗುಡ್ಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಕಳೆದ ಶನಿವಾರ ರಾತ್ರಿ ಸುರಿದ ಮಳೆಗೆ ದೊಡ್ಡ ಗಿಡವೊಂದು ಬೇರು ಸಮೇತ ಮುರಿದು ಬಿದ್ದಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ರಸ್ತೆಯ ಮಧ್ಯದಲ್ಲಿ ಅಡ್ಡಲಾಗಿ ಬಿದ್ದಿರುವ ಮರದಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ರೈತರು ಹೊಲ-ಗದ್ದೆಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಪಕ್ಕದಲ್ಲಿ ನೀರು ನಿಂತಿದ್ದು, ಮರದ ರೆಂಬೆ-ಕೊಂಬೆಗಳು ಇಡೀ ರಸ್ತೆಯನ್ನು ಆವರಿಸಿವೆ.
ಈ ಮರ ಅರಣ್ಯ ಇಲಾಖೆಗೆ ಸೇರಿರುವುದರಿಂದ ನಿಯಮದ ಪ್ರಕಾರ ಇಲಾಖೆಯವರೇ ತೆರವುಗೊಳಿಸಬೇಕು. ಆದರೆ ಬೆಳಗ್ಗೆಯಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಆಂಬುಲೆನ್ಸ್ ಬರಬೇಕಾದರೂ ದಾರಿ ಇಲ್ಲದಂತಾಗಿದೆ. ತಕ್ಷಣ ಮರವನ್ನು ಕಡಿದು ರಸ್ತೆ ಬದಿಗೆ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು” ಎಂದು ಹೊಸಗುಡ್ಡ ಗ್ರಾಮಸ್ಥರು ಆಗ್ರಹಿಸಿದ್ದಾರೆ.




