Koppal | ಸ್ಮಾರ್ಟ್ಫೋನ್, ನಿಗದಿತ ವೇತನವಿಲ್ಲದೆ ಸಮಸ್ತ ಆ್ಯಪ್ ಕೆಲಸ: ಆಶಾ ಕಾರ್ಯಕರ್ತೆಯರ ವಿರೋಧ

ಕೊಪ್ಪಳ: ಸ್ಮಾರ್ಟ್ಫೋನ್, ತಾಂತ್ರಿಕ ಸೌಲಭ್ಯ ಹಾಗೂ ನಿಗದಿತ ವೇತನವಿಲ್ಲದೆ ‘ಸಮಸ್ತ’ ಆ್ಯಪ್ ಮೂಲಕ ಹೆಚ್ಚುವರಿ ಆನ್ಲೈನ್ ಕೆಲಸ ಹೇರಿರುವುದನ್ನು ವಿರೋಧಿಸಿ ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಸವಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಪ್ರಮೋದ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆರೋಗ್ಯ, ಲಸಿಕೆ ಹಾಗೂ ಕುಟುಂಬ ಕಲ್ಯಾಣ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಈಗಾಗಲೇ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸಮಸ್ತ ಆ್ಯಪ್ನಲ್ಲಿ ಮಾಹಿತಿ ದಾಖಲಿಸುವ ಹೆಚ್ಚುವರಿ ಹೊರೆ ಹೇರಲಾಗಿದೆ ಎಂದು ಆರೋಪಿಸಿದರು.
ಹಲವು ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್, ಸಮರ್ಪಕ ನೆಟ್ವರ್ಕ್, ತರಬೇತಿ ಹಾಗೂ ತಾಂತ್ರಿಕ ನೆರವು ಲಭ್ಯವಿಲ್ಲ. ಅನೇಕ ಕಡೆ ಸರ್ವರ್ ಮತ್ತು ನೆಟ್ವರ್ಕ್ ಸಮಸ್ಯೆಯಿಂದ ಆ್ಯಪ್ನಲ್ಲಿ ಮಾಹಿತಿ ದಾಖಲಿಸುವುದು ಕಷ್ಟವಾಗುತ್ತಿದೆ. ಅಗತ್ಯ ಸೌಲಭ್ಯ ಒದಗಿಸದೆ ಸ್ವಂತ ಮೊಬೈಲ್ನಲ್ಲಿ ಕೆಲಸ ಮಾಡಿಸುವುದು ಸರಿಯಲ್ಲ ಎಂದು ಹೇಳಿದರು.
ಮೊಬೈಲ್ ಬಳಕೆಗೆ ನೀಡುವ ಮಾಸಿಕ ಭತ್ಯೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸಮಸ್ತ ಆ್ಯಪ್ನ ಹೆಚ್ಚುವರಿ ಕೆಲಸಕ್ಕೆ ಒತ್ತಡ ಹೇರುವುದನ್ನು ನಿಲ್ಲಿಸಿ, ಆಶಾ ಕಾರ್ಯಕರ್ತೆಯರ ಕೆಲಸದ ಹೊರೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು ಈಡೇರುವವರೆಗೆ ಸಮಸ್ತ ಆ್ಯಪ್ನ ಆನ್ಲೈನ್ ಕೆಲಸವನ್ನು ಮಾಡುವುದಿಲ್ಲ ಎಂದು ಸಂಘದ ಜಿಲ್ಲಾ ಸಮಿತಿ ತಿಳಿಸಿದೆ.
ಈ ವೇಳೆ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್, ಮುಖಂಡರಾದ ಶಂಕ್ರಮ್ಮ ಹಳ್ಳಿಕೇರಿ, ರೇಖಾ, ಲಲಿತಾ, ಗೀತಾ, ಸವಿತಾ, ರಜಿಯಾ ಬೇಗಂ, ದ್ರಾಕ್ಷಾಯಿಣಿ, ಲತಾ, ಪ್ರೇಮ, ಪುಷ್ಪಾವತಿ, ದ್ಯಾವಕ್ಕ, ಪುಷ್ಪಾ, ಕಸ್ತೂರಮ್ಮ, ಸುನಂದಾ, ಅನ್ನಪೂರ್ಣ, ನಾಗಮ್ಮ, ಪದ್ಮಾವತಿ, ಜೈತುನಾಬಿ, ರೇಣುಕಾ, ಜಾನಕಿ ಸೇರಿದಂತೆ ಹಲವರು ಇದ್ದರು.






