ಕೊಪ್ಪಳ |ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಂದ್ರಶೇಖರ ಕುಷ್ಟಗಿಗೆ 13 ಚಿನ್ನದ ಪದಕ

ಕನಕಗಿರಿ : ಮೈಸೂರು ವಿಶ್ವವಿದ್ಯಾಲಯದ 106 ನೇ ಘಟಿಕೋತ್ಸವ ವಿವಿಧ ವಿಷಯಗಳಲ್ಲಿ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ತಾಲ್ಲೂಕಿನ ಕನ್ನೆರಮಡಗು ಗ್ರಾಮದ ಚಂದ್ರಶೇಖರ ಕುಷ್ಟಗಿ 13 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಚಂದ್ರಶೇಖರ ಅವರು ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಕನ್ನೇರಮಡಗು ಹಾಗೂ ಮುಸಲಾಪುರ ಗ್ರಾಮದಲ್ಲಿ, ಪಿಯು ಶಿಕ್ಷಣವನ್ನು ಇರಕಲಗಡ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ನಡೆಸಿದ್ದಾರೆ. ರೈತಾಪಿ ವರ್ಗಕ್ಕೆ ಸೇರಿದ ಶಾಂತಮ್ಮ ಸಣ್ಣೆಪ್ಪ ಅವರ ಮೂರನೇ ಪುತ್ರ ಚಂದ್ರಶೇಖರ ಅವರು ಬಿಇಡಿ ಶಿಕ್ಷಣವನ್ನು ಮೈಸೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮುಗಿಸಿದರು. ನಂತರ ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎಂ.ಎ ವಿದ್ಯಾರ್ಥಿಯಾಗಿ ಸೇರಿಕೊಂಡು ಈ ಸಾಧನೆ ಮಾಡಿದ್ದಾರೆ.
ಪ್ರೊ.ತಿ.ನಂ. ಶ್ರೀಕಂಠಯ್ಯ, ಪ್ರೊ.ಡಿ.ಎಲ್. ನರಸಿಂಹಚಾರ್ಯ, ಪ್ರೊ.ಎ.ಎಸ್ ಕಾಳೇಗೌಡ, ಎಫ್.ಎಂ. ಖಾನ್ ಹೆಸರಿನಲ್ಲಿರುವ 13 ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನ ಪಡೆದಿದ್ದಾರೆ. ಇತ್ತೀಚೆಗೆ ಕೆಸೆಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.





