ಕೊಪ್ಪಳ : ಗುಡುಗು ಸಿಡಿಲು ಸಹಿತ ಭಾರೀ ಮಳೆ; ಜಾನುವಾರುಗಳು ಸಾವು, ಬೆಳೆಗಳಿಗೆ ಹಾನಿ

ಯಲಬುರ್ಗಾ : ಪಟ್ಟಣದಲ್ಲಿ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರವಿವಾರ ಸಂಜೆ ಸುರಿದ ಭಾರೀ ಮಳೆ, ಬಿರುಗಾಳಿ ಹಾಗೂ ಗುಡುಗು ಸಿಡಿಲಿನ ಅಬ್ಬರಕ್ಕೆ ಪ್ರತ್ಯೇಕ ಎರಡು ಘಟನೆಗಳಲ್ಲಿ ಒಂದು ಎಮ್ಮೆ ಮತ್ತು ಒಂದು ಎತ್ತು ಸಾವನ್ನಪ್ಪಿದ್ದು, ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ.
ಸಂಜೆ ಆರಂಭವಾದ ಮಳೆ ಮೊದಲು ಸಾಧಾರಣವಾಗಿ ಸುರಿದರೂ, ಬಳಿಕ ಬಿರುಗಾಳಿ ಹಾಗೂ ಸಿಡಿಲಿನ ಆರ್ಭಟದೊಂದಿಗೆ ತೀವ್ರಗೊಂಡಿದೆ. ಪಟ್ಟಣದ ಹೊರವಲಯದಲ್ಲಿ ಮನೆಗಳಿಗೆ ಅಳವಡಿಸಿದ್ದ ತಗಡುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿವೆ.
ಯಲಬುರ್ಗಾ ತಾಲೂಕಿನ ದಮ್ಮೂರು ಗ್ರಾಮದ ರೈತ ವಿರೂಪಣ್ಣ ಹಳ್ಳಿಕೇರಿ ಅವರಿಗೆ ಸೇರಿದ ಎಮ್ಮೆ, ಹಗೇದಾಳ ಗ್ರಾಮದ ನೀಲಪ್ಪ ಚೂರಿ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಸಾವನ್ನಪ್ಪಿದೆ. ದಮ್ಮೂರು ಗ್ರಾಮದ ಅನೇಕ ರೈತರ ತೋಟಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಭಾರೀ ಗಾಳಿಗೆ ನೆಲಕ್ಕುರುಳಿವೆ. ಈ ಘಟನೆಗಳಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಮಾರನಾಳ ಗ್ರಾಮದ ಶಂಕ್ರಪ್ಪ ಗುಳಗುಳಿ ಅವರಿಗೆ ಸೇರಿದ ಎಲೆಬಳ್ಳಿ ತೋಟಕ್ಕೂ ಭಾರಿ ಹಾನಿಯಾಗಿದ್ದು, ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಯಲಬುರ್ಗಾ ಪಟ್ಟಣದ ಮಲ್ಕ ಸಮುದ್ರ ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಮರಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.
ಮಾಹಿತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಹಾಗೂ ಸಿಡಿಲಿನಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.






