Koppal | ವಾದ ಮಂಡಿಸುವಾಗ ಕುಸಿದು ಬಿದ್ದು ವಕೀಲ ಮೃತ್ಯು

ನಿಂಗಪ್ಪ ಸುದ್ದಿ (File Photo)
ಕೊಪ್ಪಳ: ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಯೊಬ್ಬರು ತಮ್ಮ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿರುವಾಗ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಕುಷ್ಟಗಿ ನ್ಯಾಯಾಲಯದಲ್ಲಿ ನಡೆದಿದೆ.
ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ (50) ಮೃತಪಟ್ಟವರು.
ಅವರು ಕುಷ್ಟಗಿ ನ್ಯಾಯಾಲಯದಲ್ಲಿ ಭೂವಿವಾದದ ಕೇಸ್ ವೊಂದರಲ್ಲಿ ನ್ಯಾಯಾಧೀಶರ ಎದುರು ತಮ್ಮ ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತ ನಿಂಗಪ್ಪ ಅವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗಂಗಾವತಿ ಮತ್ತು ಕುಷ್ಟಗಿ ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ರಂಗಭೂಮಿ ಕಲಾವಿದರಾಗಿ ತಾವರಗೇರಾ ಸುತ್ತಲಿನ ಪ್ರದೇಶಗಳಲ್ಲಿ ಚಿರಪರಿಚಿತರಾಗಿದ್ದರು.
ಅವರ ಅಕಾಲಿಕ ಸಾವಿಗೆ ಕುಷ್ಟಗಿ ಹಾಗೂ ಗಂಗಾವತಿ ತಾಲೂಕು ನ್ಯಾಯವಾದಿಗಳ ಸಂಘ ಮತ್ತು ತಾವರಗೇರಾ ಭಾಗದ ಜನತೆ ಕಂಬನಿ ಮಿಡಿದಿದೆ.




