ಕೊಪ್ಪಳ | ಗವಿಸಿದ್ದಪ್ಪ ನಾಯಕ್ ಕೊಲೆ ಖಂಡಿಸಿ ಪ್ರತಿಭಟನೆ

ಕೊಪ್ಪಳ, ಆ.11: ಗವಿಸಿದ್ದಪ್ಪ ನಾಯಕ್ ಕೊಲೆ ಖಂಡಿಸಿ ಅರೋಪಿಗಳಿಗೆ ಗಲ್ಲು ಶಿಕ್ಷೆವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕವು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ವಾರದ ಹಿಂದೆ ಕೊಪ್ಪಳದ ನಿವಾಸಿ ಗವಿಸಿದ್ದಪ್ಪ ನಾಯಕ್ ಎಂಬ ಯುವಕನನ್ನು ಪ್ರೀತಿ ವಿಚಾರವಾಗಿ ನಿರ್ಮಿತಿ ಕೇಂದ್ರದ ರಸ್ತೆ ಬಳಿ ಕೊಲೆ ಮಾಡಲಾಗಿತ್ತು ಈ ಕೊಲೆಯನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಅಮಾನುಷವಾಗಿ ಕೊಲೆಯಾದ ಗವಿಸಿದ್ದಪ್ಪ ನಾಯಕನ್ನು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಆತನ ಕುಟುಂಬಕ್ಕೆ ಆಸರೆ ಮತ್ತು ನ್ಯಾಯ ಕೊಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಗೆ ನಗರದ ಬಹುತೇಕ ಅಂಗಡಿ ಮುಗಟ್ಟುಳನ್ನು ಮುಚ್ಚಿ ಬೆಂಬಲ ಸೂಚಿಸಿದರೆ, ಮುಚ್ಚದ ಅಂಗಡಿಗಳನ್ನು ಪ್ರತಿಭಟನಾಕಾರರು ಒತ್ತಾಯ ಪೂರ್ವಕವಾಗಿ ಮುಚ್ಚಿಸಿದರು, ಇನ್ನು ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಖಾಸಗಿ ಶಾಲೆಗಳಿಗೆ ಶಾಲಾಮಂಡಳಿಗಳು ರಜೆ ಘೋಷಿಸಿದ್ದವು. ಪ್ರತಿಭಟನೆಯು ಮುಗಿದ ನಂತರ ಅಂಗಡಿಗಳು ಮತ್ತೆ ತೆರೆದಿದ್ದವು, ಉಳಿದಂತೆ ಸರ್ಕಾರಿ ಶಾಲೆಗಳು ಮತ್ತು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.
ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಶಿವನಗೌಡ ನಾಯಕ, ರಾಜುಗೌಡ ನಾಯಕ, ಬಸವರಾಜ ದಡೆಸೂಗೂರು, ಮೃತ ಗವಿಸಿದ್ದಪ್ಪನ ತಂದೆ ನಿಂಗಪ್ಪ ನಾಯಕ, ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ್ ದಢೇಸುಗೂರು, ಬಸವರಾಜ್ ಕ್ಯಾವಟರ್, ಸಿವಿ ಚಂದ್ರಶೇಖರ, ಬಸವರಾಜ ಕ್ಯಾವಟರ್, ಡಾ. ಕೆ. ಎನ್. ಪಾಟೀಲ, ರಾಮಣ್ಣ ಕಲ್ಲನವರ, ಶರಣಪ್ಪ ನಾಯಕ, ಸುರೇಶ ಡೊಣ್ಣಿ, ಬಂಗಾರು ಲಕ್ಷ್ಮಣ, ರವಿ, ಟಿ. ರತ್ನಾಕರ, ನಾಗರಾಜ ಬಿಲ್ಗಾರ, ಯಮನೂರಪ್ಪ ನಾಯಕ, ಶಿವಮೂರ್ತಿ ಗುತ್ತೂರು, ಮಂಜುನಾಥ ಜಿ. ಗೊಂಡಬಾಳ, ಮಾರುತಿ ತೋಟಗಂಟಿ, ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಶಿವರಡ್ಡಿ ವಕೀಲರು, ಹನುಮೇಶ ನಾಯಕ, ಸಿ. ಗದ್ದೆಪ್ಪ, ರುಕ್ಮಣ್ಣ ಶಾವಿ, ಕರಿಯಪ್ಪ ಬೀಡನಾಳ, ಬಸವರಾಜ ಬಿ. ಲಿಂಗೇಶ ಕಲ್ಗುಡಿ, ಜ್ಯೋತಿ ಎಂ.ಗೊಂಡಬಾಳ, ವಿಶಾಲಾಕ್ಷಿ ವಾಲ್ಮೀಕಿ, ಸುಮಂಗಲಾ ನಾಯಕ ಮತ್ತಿತರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಅರೋಪಿಗಳನ್ನು ಬಂಧಿಸಿದೆ, ನಿಕ್ಷಪಕ್ಷಪಾತ ತನಿಖೆ ನಡೆಸಲಾಗುತ್ತಿದ್ದು, ತ್ವರಿತ ಗತಿಯಲ್ಲಿ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪರಿಹಾರ ವಿತರಿಸಲಾಗಿದೆ. ಕುಟುಂಬಕ್ಕೆ ಉದ್ಯೋಗದ ಬೇಡಿಕೆಯನ್ನು ಇಟ್ಟಿದ್ದು, ಇದರ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಶಾಂತಿಯುತವಾಗಿ ಮನವಿ ಸಲ್ಲಿಸಿದಕ್ಕೆ ಧನ್ಯವಾದಗಳು.
-ಸುರೇಶ್ ಇಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿ
ನನಗೆ ಆದ ಸ್ಥಿತಿ ಯಾವ ತಂದೆ-ತಾಯಿಗೂ ಬರಬಾರದು. ನಮಗೆ ಮಣ್ಣು ಹಾಕಬೇಕಿದ್ದ ಮಗನಿಗೆ ನಾವು ಮಣ್ಣುಹಾಕಿದ್ದೇವೆ. ಇದು ನಮ್ಮ ಕರ್ಮ. ನೀವು ಎಲ್ಲರು ಸೇರಿ ನನ್ನ ಮಗನಿಗೆ ನ್ಯಾಯ ಕೊಡಿಸಿ, ಇಷ್ಟು ಸಾಕು. ನನ್ನ ಮಗನ ಸಾವಿಗೆ ಕಾರಣಳಾದ ಆ ಹುಡುಗಿಗೆ ಗಲ್ಲು ಶಿಕ್ಷೆ ಕೊಡಿಸಬೇಕು, ನನ್ನ ಮಗನೇ ಇಲ್ಲದ ಮೇಲೆ ನೌಕರಿ, ರೊಕ್ಕ ತಗೊಂಡು ಏನು ಮಾಡಬೇಕು.
-ಮೃತ ಯವಕನ ತಾಯಿ
ಮೃತ ಗವಿಸಿದ್ದಪ್ಪ ಅವರಿಗೆ ನ್ಯಾಯ ಕೊಡಿಸಲು ಎಲ್ಲ ಸಮುದಾಯದವರು ಇಲ್ಲಿ ಸೇರಿದ್ದು, ಪ್ರತಿಭಟನೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೊಲೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಡ ಹಾಕುತ್ತೇವೆ. ಈ ಪ್ರಕರಣವನ್ನು ಸರಕಾರದ ಗಮನಕ್ಕೆ ತಂದಿದ್ದು, ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು.
- ಕೆ.ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಶಾಸಕ







