ಕೊಪ್ಪಳ | ಗವಿಸಿದ್ದಪ್ಪ ನಾಯಕ ಕೊಲೆ ಖಂಡಿಸಿ ಪ್ರತಿಭಟನೆ: ನಗರದ ಅಂಗಡಿಗಳು ಬಂದ್

ಕೊಪ್ಪಳ: ವಾರದ ಹಿಂದೆ ಕೊಪ್ಪಳದಲ್ಲಿ ನಡೆದ ಗವಿಸಿದ್ದಪ್ಪ ನಾಯಕ್ ಕೊಲೆ ಕೃತ್ಯ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕವು ಇಂದು ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಸಂಪೂರ್ಣ ಸ್ತಬ್ಧಗೊಂಡಿದೆ.
ಖಾಸಗಿ ಶಾಲೆಗಳ ಒಕ್ಕೂಟ ಇಂದು ಶಾಲೆಗಳಿಗೆ ರಜೆ ಘೋಷಿಸಿದೆ. ಬಹುತೇಕ ಅಂಗಡಿಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿವೆ. ತೆರದಿದ್ದ ಅಂಗಡಿಗಳನ್ನು ಪ್ರತಿಭಟನೆಗೆ ಕರೆಯ ಬೆಂಬಲಿಗರು ಮುಚ್ಚಿಸುತ್ತಿರುವುದು ಕಂಡುಂಬಂದಿದೆ.
ಸರಕಾರಿ ಶಾಲೆಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಯಾವುದೇ ರಜೆ ಘೋಷಣೆ ಮಾಡಲಾಗಿಲ್ಲ.
ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಜಾಗೃತೆ ವಹಿಸಿದ್ದಾರೆ.
ನಗರದ ಕುರುಬರ ಓಣಿಯ ನಿವಾಸಿ ಗವಿಸಿದ್ದಪ್ಪ ನಾಯಕ್ (26)ರನ್ನು ಆ.3ರಂದು ರಾತ್ರಿ ನಗರದ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂದಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.







