Koppal | 11-ಎ ವಿತರಣಾ ಕಾಲುವೆವರೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ: ವಿಜಯನಗರ ಎಡದಂಡೆ ಮುಖ್ಯ ಕಾಲುವೆಯ 11-ಎ ವಿತರಣಾ ಕಾಲುವೆವರೆಗೆ ತಕ್ಷಣ 1.5 TMC ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಹಾಗೂ ಜನಪ್ರತಿನಿಧಿಗಳ ನಿಯೋಗ ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮುನಿರಾಬಾದ್ನ ತುಂಗಭದ್ರಾ ಜಲಾಶಯದ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ತೀರ್ಮಾನದಂತೆ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಡಾ. ಬಸವರಾಜ್ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಿಯೋಗವು, ಕೊರಗಲ್ ಅಣೆಕಟ್ಟಿನ ಕಾಲುವೆಗಳ ಹಕ್ಕಿನಡಿ ವಿಜಯನಗರ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿಭೂಮಿಗೆ ಶತಮಾನಗಳಿಂದ ನೀರು ಪೂರೈಕೆಯಾಗುತ್ತಿದ್ದು, ಈ ಭಾಗದ ರೈತರು, ಜನರು ಹಾಗೂ ಜಾನುವಾರುಗಳು ಇದೇ ನೀರನ್ನು ಅವಲಂಬಿಸಿ ಬದುಕುತ್ತಿವೆ ಎಂದು ವಿವರಿಸಿತು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು ವಿಜಯನಗರ ಕಾಲುವೆಗಳ ವಾರ್ಷಿಕ 5.71 TMC ಐತಿಹಾಸಿಕ ನೀರಿನ ಬಳಕೆಯನ್ನು ಅಧಿಕೃತವಾಗಿ ಗುರುತಿಸಿದ್ದು, ಹೊಸ ಯೋಜನೆಗಳಿಗಿಂತ ಈ ಬಳಕೆಗೆ ಆದ್ಯತೆ ನೀಡಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ವಿಜಯನಗರ ಎಡದಂಡೆಯ 11-ಎ ಉಪ ಕಾಲುವೆವರೆಗೆ 1.5 TMC ನೀರು ಬಿಡುಗಡೆ ಮಾಡುವುದು ಈ ಭಾಗದ ರೈತರ ಐತಿಹಾಸಿಕ ಹಾಗೂ ಕಾನೂನುಬದ್ಧ ಹಕ್ಕಾಗಿದೆ. ರೈತರ ಹಕ್ಕಿಗೆ ಧಕ್ಕೆಯಾಗದಂತೆ 11-ಎ ವಿತರಣಾ ಕಾಲುವೆಯ ಕೊನೆಯ ಭಾಗದವರೆಗೂ ತಕ್ಷಣ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ನಿಯೋಗದಲ್ಲಿ ನವೀನ ಗುಳಗಣ್ಣವರ್, ಪ್ರಭುರಾಜ ಪಾಟೀಲ್, ಪ್ರದೀಪ್ ಹಿಟ್ನಾಳ, ಸುನಿಲ್ ಹೆಸರೂರು, ಅಶೋಕ ಗುಲದಳ್ಳಿ, ಬಸವರಾಜ್ ಉಳ್ಳಾಗಡ್ಡಿ , ಖಾಜಾ ಹುಸೇನ್ ಹೊಸಳ್ಳಿ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಉಪಸ್ಥಿತರಿದ್ದರು.






