ಕೊಪ್ಪಳ | 15 ಸಾವಿರ ರೂ. ಸಂಬಳಕ್ಕೆ ದುಡಿಯುವ ಗುತ್ತಿಗೆ ನೌಕರನ ಬಳಿ 24 ಮನೆಗಳು, ಆರು ನಿವೇಶನಗಳು ಪತ್ತೆ
ಲೋಕಾಯುಕ್ತ ದಾಳಿ, ಪರಿಶೀಲನೆ

ಕೊಪ್ಪಳ : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (krdil) ಹೊರಗುತ್ತಿಗೆೆ ಆಧಾರದಲ್ಲಿ ದಿನಗೂಲಿ ನೌಕರನಾಗಿದ್ದ ಕಳಕಪ್ಪ ನಿಡುಗುಂದಿ ಎಂಬವರ ಬಳಿ ಲೋಕಾಯುಕ್ತರ ದಾಳಿಯಲ್ಲಿ ಕೋಟಿ ಕೋಟಿ ರೂ. ಗಳ ಆಸ್ತಿ ಪತ್ತೆಯಾಗಿರುವುದು ವರದಿಯಾಗಿದೆ.
ಕೆಲ ತಿಂಗಳುಗಳ ಹಿಂದೆ ಅಮಾನತುಗೊಂಡಿದ್ದ ಕಳಕಪ್ಪ ಅವರಿಗೆ ಕೇವಲ 15 ಸಾವಿರ ರೂ. ತಿಂಗಳಿಗೆ ಸಂಬಳವಿತ್ತು. ಆದರೆ ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಇವರು ಕೋಟ್ಯಧಿಪತಿ ಎಂದು ತಿಳಿದು ಬಂದಿದ್ದು, ಇವರ ಬಳಿ ಇರುವ ಸಂಪತ್ತು ಲೋಕಾಯುಕ್ತ ಪೊಲೀಸರನ್ನೇ ನಿಬ್ಬೆರಗಾಗಿಸಿದೆ.
ಇವರ ಒಡೆತನದಲ್ಲಿ ಕೊಪ್ಪಳ ಮತ್ತು ಭಾಗ್ಯನಗರದಲ್ಲಿ 24 ಮನೆಗಳು, ಆರು ನಿವೇಶನಗಳು ಜೊತೆ 40 ಎಕರೆ ಕೃಷಿ ಜಮೀನು, 350 ಗ್ರಾಂ ಚಿನ್ನಾಭರಣ, ಒಂದೂವರೆ ಕೆ.ಜಿ. ಬೆಳ್ಳಿಯ ಆಭರಣಗಳು, ಎರಡು ಬೈಕ್ ಮತ್ತು ಎರಡು ಕಾರುಗಳು ಮತ್ತು ತನ್ನ ತಮ್ಮ ಹಾಗೂ ತಮ್ಮನ ಹೆಂಡತಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಇರುವುದಾಗಿ ಲೋಕಾಯುಕ್ತರ ದಾಳಿಯಲ್ಲಿ ತಿಳಿದು ಬಂದಿದೆ.
ಕಳಕಪ್ಪ ವಿರುದ್ಧ ಕೆಆರ್ಐಡಿಎಲ್ ಅಧಿಕಾರಿಗಳೇ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.
72 ಕೋಟಿ ರೂ. ಅಕ್ರಮ ವಿಚಾರವಾಗಿ ದೂರು :
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಸುಮಾರು 72 ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂಬ ವಿಚಾರವಾಗಿ ಅಧಿಕಾರಿಗಳು ಕಳೆದ ವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಚರಂಡಿ ಕಾಮಗಾರಿ, ಕುಡಿಯುವ ನೀರು ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳದಲ್ಲಿ ಅಕ್ರಮದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೊಪ್ಪಳ ಕೆಆರ್ಐಡಿಎಲ್ ಇಇ ಆಗಿದ್ದ ಝಡ್.ಎಂ ಚಿಂಚೋಳಿಕರ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನೀಡಗುಂದಿ ವಿರುದ್ದ ದೂರು ದಾಖಲಾಗಿತ್ತು. ಈ ದೂರಿನ ಆಧಾರದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.







