ಕೊಪ್ಪಳ | ಕಾರ್ಖಾನೆ ವಿರೋಧಿ ಹೋರಾಟಕ್ಕೆ 75 ದಿನ: ಧರಣಿ ನಿರತರಿಗೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಬೆಂಬಲ

ಕೊಪ್ಪಳ : ನಾನು ಹಳ್ಳಿಯ ರೈತನಾಗಿ ಬೆಳೆದವನು. ರೈತರು ಬೂದಿ ಮತ್ತು ಹೊಗೆಯ ನಡುವೆ ಬದುಕುವುದು ಅಸಾಧ್ಯದ ಮಾತು. ಈ ಗಂಭೀರ ಸಮಸ್ಯೆಯನ್ನು ಇಡೀ ರಾಜ್ಯಕ್ಕೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಕರೆ ನೀಡಿದರು.
ನಗರಸಭೆಯ ಎದುರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪರಿಸರ ಮಾರಕ ಕಾರ್ಖಾನೆಗಳ ವಿರೋಧಿ ಅನಿರ್ದಿಷ್ಟಾವಧಿ ಧರಣಿಯ 75ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರಣಿಯಲ್ಲಿ ಭಾಗವಹಿಸಿದ ನಂತರ ಭಗವಾನ್ ಅವರು ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ ಹಾಗೂ ಹಾಲವರ್ತಿ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರು, ವಿದ್ಯಾರ್ಥಿಗಳು ಮತ್ತು ಗೃಹಿಣಿಯರೊಂದಿಗೆ ಸಂವಾದ ನಡೆಸಿದರು.
ಇಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈಗಿರುವ ಕಾರ್ಖಾನೆಗಳ ಕಾಟವೇ ತಡೆಯಲಾಗುತ್ತಿಲ್ಲ, ಇನ್ನು ಹೊಸ ಕಾರ್ಖಾನೆಗಳು ಬಂದರೆ ಜನರ ಗತಿಯೇನು? ಮುಖ್ಯಮಂತ್ರಿಗಳು ಜನಪರವಾಗಿದ್ದು, ಈ ಭಾಗಕ್ಕೆ ಭೇಟಿ ನೀಡುವಂತೆ ಹಾಗೂ ವಿಧಾನಸೌಧದಲ್ಲಿ ಈ ಧ್ವನಿ ಕೇಳುವಂತೆ ನಾನು ಅವರ ಮೇಲೆ ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.
ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ ಮಾತನಾಡಿ, ಮೂರು ತಿಂಗಳಿಂದ ಹೋರಾಟ ನಡೆಯುತ್ತಿದ್ದರೂ ಸ್ಥಳೀಯ ಶಾಸಕರು ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಪಲಾಯನವಾದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ವಕೀಲ ರಾಜು ಬಾಕಳೆ ಮಾತನಾಡಿ, ಕಾನೂನು ಹೋರಾಟದಲ್ಲಿ ಹಿನ್ನಡೆಯಾದರೂ, ಜನಸಂಗ್ರಾಮದ ಮೂಲಕ ಈ ಹೋರಾಟ ಗೆಲ್ಲುವ ವಿಶ್ವಾಸವಿದೆ ಎಂದರು.
ರೈತ ಮಹಿಳೆ ಗಿರಿಯಮ್ಮ ಹಾಗೂ ಮಾರ್ಕಂಡಯ್ಯ ಹಿರೇಮಠ ಅವರು ಮಾತನಾಡಿ, ವಿಷಪೂರಿತ ಗಾಳಿ ಮತ್ತು ನೀರಿನಿಂದಾಗಿ ಮಕ್ಕಳು ಅಸ್ತಮಾ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನೆ-ಹೊಲ ಮಾರಿ ಊರು ಬಿಡುವ ಸ್ಥಿತಿ ಬಂದಿದೆ ಎಂದು ಭಾವುಕರಾಗಿ ನುಡಿದರು.
ದದೇಗಲ್ ಸದ್ಗುರು ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಿಸರ ಉಳಿವಿಗೆ ಎಲ್ಲರೂ ಸಂಘಟಿತರಾಗಬೇಕು ಎಂದರು.
ಧರಣಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇg, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ್, ಎ. ಎಂ.ಮದರಿ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ, ರಾಜು ಬಾಕಳೆ, ರಾಜ್ಯ ರೈತ ಸಂಘದ ಮುಖಂಡರಾದ ನಜೀರಸಾಬ್ ಮೂಲಿಮನಿ, ಭೀಮಸೇನ ಕಲಕೇರಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಸಾವಿತ್ರಿ ಮುಜುಮದಾರ, ಖಾಸಗಿ ಶಾಲಾ ಆಡಳಿತ ಮಂಡಳಿ ಕುಸುಮ ಸಂಘಟನೆಯ ಅಧ್ಯಕ್ಷ ಶಾಯೀದ್ ತಹಶೀಲ್ದಾರ, ದಾನಪ್ಪ ಕವಲೂರು, ಅಲೀಮುದ್ದಿನ್, ಸುರೇಶ ಕುಂಬಾರ, ಮುಖಂಡರಾದ ಶುಕರಾಜ ತಾಳಕೇರಿ, ಮಂಜು ಹಾಲವರ್ತಿ, ರಂಗ ಕಲಾವಿದೆ ಎಚ್. ಬಿ. ಸರೋಜಮ್ಮ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಗಡ್ಡಿ, ರವಿ ಕಾಂತನವರ, ಗವಿಸಿದ್ದಪ್ಪ ಹಲಿಗಿ, ಜಿ. ಎಸ್. ಕಡೇಮನಿ, ಮಹಾದೇವಪ್ಪ ಮಾವಿನಮಡು, ಬಸವರಾಜ ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ, ಮಂಜುನಾಥ ಕವಲೂರು, ಸಿ. ಬಿ. ಪಾಟೀಲ್, ಸುಂಕಪ್ಪ ಮೀಸಿ, ಮಲ್ಲಪ್ಪ ಮಾ. ಪಾ., ಗಣೇಸ ವಿಶ್ವಕರ್ಮ, ಸುರೇಶ ಪೂಜಾರ, ಸದಾಶಿವ ಪಾಟೀಲ್ ಸೇರಿ ನೂರಾರು ಜನರು ಪಾಲ್ಗೊಂಡರು.







