ಕೊಪ್ಪಳ | ಬಲ್ಡೋಟ ಸಹಿತ ಹಲವು ಕಾರ್ಖಾನೆಗಳ ವಿರುದ್ಧ ತೀವ್ರಗೊಂಡ ಹೋರಾಟ
ಒಂದು ಲಕ್ಷ ಪತ್ರ ಚಳವಳಿಗೆ ನಿರ್ಧರಿಸಿದ ಜಿಲ್ಲಾ ಬಚಾವೋ ಆಂದೋಲನ ಸಮಿತಿ

ಕೊಪ್ಪಳ : ಬಲ್ಡೋಟದ ಎಂಎಸ್ಪಿಲ್ನ ಬಿಎಸ್ಪಿಎಲ್ ಕಾರ್ಖಾನೆ ಸಹಿತ ಜನರಿಗೆ ಮಾರಕವಾಗಿರುವ ಎಲ್ಲ ಕಂಪೆನಿಗಳನ್ನು ಕೊಪ್ಪಳ ಬಿಟ್ಟು ತೊಲಗಿಸುವವರೆಗೆ ವಿರಮಿಸುವುದಿಲ್ಲ ಎಂಬ ನಿರ್ಣಯದೊಂದಿಗೆ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನದ ವತಿಯಿಂದ ಹೋರಾಟದ ರೂಪುರೇಷೆ ಸಭೆ ನಡೆಯಿತು.
ಶ್ರೀ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಹೋರಾಟಕ್ಕೆ ಕೊಪ್ಪಳ ಮತ್ತು ಬಾಧಿತ ಪ್ರದೇಶದ ಜನರನ್ನು ಸಜ್ಜುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ಪ್ರಮುಖವಾಗಿ ಪ್ರತೀ ವಾರ್ಡ್ನಲ್ಲಿ ಪರಿಸರ ಜಾಗೃತಿ ಸಭೆ ನಡೆಸುವುದು ಅದರಲ್ಲಿ ಕೊಪ್ಪಳದ 31 ಮತ್ತು ಭಾಗ್ಯ ನಗರದ 19 ಹಾಗೂ ಸುಮಾರು 30 ಗ್ರಾಮಗಳಲ್ಲಿ ಸಭೆ ನಡೆಸುವುದು. ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಯೊಂದು ಸಂಘಟನೆಗಳನ್ನು ಅದರಲ್ಲಿ ತೊಡಗಿಸಿಕೊಳ್ಳುವದು. ಕ್ಷೇತ್ರದ ಸುಮಾರು 35 ಸಾವಿರ ಕುಟುಂಬಗಳಿಂದ ಪ್ರತೀ ಕುಟುಂಬದಿಂದ ರಾಷ್ಟ್ರಪತಿಗಳು, ಪರಿಸರ ಸಚಿವಾಲಯ ಮತ್ತು ಹಸಿರು ನ್ಯಾಯಾಧೀಕರಣಕ್ಕೆ ಒಟ್ಟು ಮೂರರಂತೆ ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳವಳಿ ನಡೆಸುವುದು. ನಂತರ ಹೋರಾಟದ ಮುಖ್ಯ ನೇತೃತ್ವವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ವಹಿಸಿಕೊಳ್ಳುವಂತೆ ಮತ್ತು ಜಿಲ್ಲೆಯ ಎಲ್ಲ ಮಠಾಧೀಶರು ಭಾಗವಹಿಸುವಂತೆ ಮನವಿ ಸಲ್ಲಿಸುವುದು ಸೇರಿದಂತೆ ನಿರಂತರ ಜನಹೋರಾಟವಾಗಿ ರೂಪಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರ್ಣಯ ಅಂಗೀಕರಿಸಲಾಯಿತು.
ಗವಿಶ್ರೀ ನೇತೃತ್ವದಲ್ಲಿ ಎಲ್ಲ ಮಠಾಧೀಶರು 10 ಸಾವಿರ ಜನರೊಂದಿಗೆ ಕಂಪೆನಿಯನ್ನು ಲಾಕ್ ಮಾಡಿ ಹೋರಾಟ ಮಾಡಬೇಕು. ಪ್ರಗತಿಪರರು, ಶಿಕ್ಷಣ ಸಂಸ್ಥೆಗಳು, ವಕೀಲರು, ವೈದ್ಯರು, ಮಹಿಳಾ ಸಂಘಟನೆಗಳು ಒಂದೊಂದು ದಿನ ನಿರಂತರವಾಗಿ ಹೋರಾಟ ಮಾಡಬೇಕು. ಕ್ರಾಂತಿಯ ಮೂಲಕ ಹೋರಾಟ ಮಾಡೋಣ. ಅಕ್ರಮವಾಗಿ ಹಾಕಿದ ಕಂಪೌಂಡ್ ಒಡೆಯುವದು ಸೇರಿದಂತೆ ಏಳೆಂಟು ತಂಡಗಳನ್ನು ಮಾಡಿ ಜೈಲ್ ಭರೋ ಕಾರ್ಯಕ್ರಮ ಸೇರಿ ಎಲ್ಲ ಬಗೆಯ ಹೋರಾಟದ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಪ್ರಮುಖರಾದ ಅಂದಣ್ಣ ಅಗಡಿ, ಸಿದ್ದಣ್ಣ ನಾಲ್ವಾಡ, ಡಾ. ಚಂದ್ರಶೇಖರ ಕರಮುಡಿ, ಮಹಾಂತೇಶ ಮಲ್ಲನಗೌಡರ್, ಶರಣು ಡೊಳ್ಳಿನ, ಕಾಶಪ್ಪ ಛಲವಾದಿ, ಬಿ. ಜಿ. ಕರಿಗಾರ, ವೈ.ಬಿ. ಬಂಡಿ, ನಿವೃತ್ತ ಪ್ರಾಂಶುಪಾಲ ರಾಜೂರ, ವಿಪಿನ್ ತಾಲೇಡಾ, ಮುದುಕಪ್ಪ, ರವಿ ಕಾಂತನವರ, ಮೌನೇಶ ಬಡಿಗೇರ, ಬಸವರಾಜ ಶರಣು ಗಡ್ಡಿ, ಡಿ.ಎಚ್.ಪೂಜಾರ, ಸಮಿತಿಯ ಪ್ರಧಾನ ಸಂಚಾಲಕ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ ಜಿ.ಗೊಂಡಬಾಳ, ಕೆ. ಬಿ. ಗೋನಾಳ ಉಪಸ್ಥಿತರಿದ್ದರು.