ಹೊಸ ಏಕಲವ್ಯ ಮಾದರಿ ಶಾಲೆ ಮಂಜೂರಿಗೆ ಅರ್ಹತಾ ಮಾನದಂಡ ಸಡಿಲಿಕೆ ಮಾಡಿ: ಸಂಸದ ಜಿ.ಕುಮಾರ ನಾಯಕ ಮನವಿ

ಕೊಪ್ಪಳ : ಹೊಸ ಏಕಲವ್ಯ ಮಾದರಿ ವಸತಿ ಶಾಲೆ(ಇ.ಎಂ.ಆರ್.ಎ) ಸ್ಥಾಪನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳಲ್ಲಿ ಸಡಿಲಿಕೆ ಮಾಡುವಂತೆ ಕೋರಿ ರಾಯಚೂರು ಲೋಕಸಭೆ ಕ್ಷೇತ್ರದ ಸಂಸದರಾದ ಜಿ.ಕುಮಾರ ನಾಯಕ ಅವರು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲ ಕಾರ್ಯದರ್ಶಿಗಳಾದ ವಿಭು ನಾಯರ್ ಅವರಿಗೆ ಮನವಿ ಮಾಡಿದ್ದಾರೆ.
ಅವರು ಅ.18ರಂದು ಹೊಸ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರಿಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಹೊಸ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರಿಗೆ ಅರ್ಹತಾ ಮಾನದಂಡ ಸಡಿಲಿಕೆಗೆ ಬುಡಕಟ್ಟು ವ್ಯವಹಾರ ಇಲಾಖೆಯ ಅಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಂಜನಾ ಚೋಪ್ರಾ ಅವರಿಗೆ ಪತ್ರ ಬರೆದಿದ್ದಾರೆ. ಸಂಸದರರಾದ ಜಿ.ಕುಮಾರ ನಾಯಕ ಅವರ ಮನವಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಹಾಗೂ ಕರ್ನಾಟಕದಲ್ಲಿ ಹೊಸ ಏಕಲವ್ಯ ಮಾದರಿ ವಸತಿ ಸ್ಥಾಪನೆಗಾಗಿ ತಕ್ಷಣವೇ ಮಾರ್ಗಸೂಚಿಗಳಲ್ಲಿ ಸಡಿಲಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುವುದಾಗಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ 20,000 ಕ್ಕಿಂತ ಹೆಚ್ಚು ಎಸ್ಟಿ ಸಮುದಾಯದ ಜನಸಂಖ್ಯೆ ಹೊಂದಿರುವ 68 ಬ್ಲಾಕ್ಗಳಿವೆ. ಆದರೆ ಇವು ಹೊಸದಾಗಿ ಪರಿಷ್ಕರಿಸಲಾದ ಮಾರ್ಗಸೂಚಿಗಳನ್ನು ಪೂರೈಸುವುದಿಲ್ಲ. ಇದರಿಂದಾಗಿ ಈ ಸಮುದಾಯಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರಿಂದ ವಂಚಿತರಾಗುತ್ತಿವೆ. 2011ರ ಜನಗಣತಿಯ ಪ್ರಕಾರ, ರಾಜ್ಯದ ಐದು ಭೌಗೋಳಿಕ ವಲಯಗಳಾದ 22 ಜಿಲ್ಲೆಗಳು ಮತ್ತು 70 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಟಿ ಜನಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಸಮುದಾಯ ಮತ್ತು ಇತರ ಅತ್ಯಂತ ಹಿಂದುಳಿದ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಣೆಯಾಗದೆ ಕರ್ನಾಟಕ ತನ್ನ ನಿಜವಾದ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಿಲ್ಲ. ಮಾರ್ಗಸೂಚಿಗಳ ಸಡಿಲಿಕೆ ಮೂಲಕ ಕರ್ನಾಟಕದ ಹೆಚ್ಚಿನ ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಹೊಸ ಏಕಲವ್ಯ ಮಾದರಿ ವಸತಿ ಶಾಲೆ ಮುಖಾಂತರ ಗುಣಮಟ್ಟದ, ಸಮಗ್ರ ಶಿಕ್ಷಣವನ್ನು ಪಡೆಯಲು ಅವಕಾಶ ಸಿಗುತ್ತದೆ. ನಿಯಮ ಬದಲಾವಣೆ ಅತೀ ತುರ್ತು ಮತ್ತು ಅಗತ್ಯವಾದ ವಿಷಯವಾಗಿದೆ ಎಂದು ಕೋರಲಾಗಿದೆ.







