ಕುಕನೂರು | ಕ್ರೇಶ್ ಸಂಸ್ಥೆಯಿಂದ ಕೂಸಿನ ಮನೆಗಳ ಪರಿಶೀಲನೆ

ಕುಕನೂರು : ತಾಲೂಕಿನ ತಳಕಲ್, ಮಂಡಲಗೇರಿ, ಇಟಗಿ, ರಾಜೂರ, ಮಸಬಹಂಚಿನಾಳ, ಬೆಣಕಲ್ ಮತ್ತು ಭಾನಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಕೂಸಿನ ಮನೆಗಳಿಗೆ ಮೊಬೈಲ್ ಕ್ರೆಶ್ ಸಂಸ್ಥೆಯ ಬೆಂಗಳೂರು ತಂಡ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಬೆಂಗಳೂರು ಮೊಬೈಲ್ ಕ್ರೇಶ್ ಸಂಸ್ಥೆ ತಂಡದ ಶಶಿಧರ್ ಮತ್ತು ರಜಿನಿ ಎಚ್. ಅವರು ಭೇಟಿ ನೀಡಿ, ಕೂಸಿನ ಮನೆಗಳ ಆರೈಕೆಯ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.
ಕೂಸಿನ ಮನೆಯಲ್ಲಿ ಮಕ್ಕಳ ಹಾಜರಾತಿ, ಗುಣಮಟ್ಟದ ಆಹಾರ, ವಿತರಣೆ, ದಾಖಲಾತಿಗಳ ನಿರ್ವಹಣೆ, ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಮಾಹಿತಿ, ಹಾಡು, ನೃತ್ಯ, ಆರೋಗ್ಯ ತಪಾಸಣೆ ಪೋಷಕರ ಸಭೆ ಮತ್ತು ಕೂಸಿನ ಮನೆ ಮೇಲ್ವಿಚಾರಣಾ ಸಭೆ ಮುಂತಾದವುಗಳ ಬಗ್ಗೆ ಕೂಸಿನ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೇರ್ ಟಕರ್ ಗಳಿಂದ ಮಾಹಿತಿ ಪಡೆದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕೆರ್ ಟೇಕರ್ ಅವರು ಮನೆ ಮನೆ ಭೇಟಿ ನೀಡಿ ಕರೆದುಕೊಂಡು ಬರಬೇಕು. ಜಿಲ್ಲಾ ಪಂಚಾಯತ್ನಲ್ಲಿ ನಿರ್ಧರಿಸಿದ ಆಹಾರ ಮೆನುವಿನ ಪ್ರಕಾರ ಪೌಷ್ಠಿಕ ಆಹಾರ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಬೇಕು. ಕಡಿಮೆ ತೂಕದ ಮಕ್ಕಳು ಕಂಡುಬಂದಲ್ಲಿ ಅಂತವರಿಗೆ ಹೆಚ್ಚುವರಿ ಆಹಾರ ಒದಗಿಸಬೇಕು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಟಿಕೆ ಸಾಮಗ್ರಿಗಳು ಇರುವಂತೆ ನೋಡಿಕೊಳ್ಳಬೇಕು, ಪ್ರತೀ ತಿಂಗಳು ಪೋಷಕರ ಸಭೆ, ಕೂಸಿನ ಮನೆ ಮೇಲುಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಆಯೋಜನೆ ಮಾಡಿದಲ್ಲಿ ಕೂಸಿನ ಮನೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಣೆಯಾಗುತ್ತವೆ. ಕೇಂದ್ರ ಗ್ರಾಮ ಪಂಚಾಯತಿಗೆ ಒಂದೆ ಇರುವುದರಿಂದ ಎಲ್ಲಾ ಗ್ರಾಮಗಳ ಜನರ 3 ವರ್ಷದೊಳಗಿನ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕಾಗಿ ವಾರ್ಡ್ ಸಭೆ, ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನ ಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದನಗೌಡ ರಬ್ಬನಗೌಡ್ರ, ವೈಜನಾಥ ಸಾರಂಗಮಠ, ಪ್ರಕಾಶ್ ಶಿಡ್ನಳ್ಳಿ, ರಮೇಶ್ ತಿಮ್ಮಾರಡ್ಡಿ, ಸುರೇಶ್ ಕಾವಳೆ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಸೀಮಾ ಕೌಸರ್, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಕೇರ್ ಟೇಕರ್ ಹಾಜರಿದ್ದರು.







