ಒಳಮೀಸಲಾತಿ ಜಾರಿಗಾಗಿ ಆ.1ರಂದು ಬೃಹತ್ ಪ್ರತಿಭಟನೆ : ಬಸವರಾಜ್ ದಡೇಸೂಗುರು

ಕೊಪ್ಪಳ : ಒಳ ಮೀಸಲಾತಿ ಜಾರಿಗಾಗಿ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ಪೂರ್ವಭಾವಿ ಸಭೆಯಲ್ಲಿ ಆ.1ರಂದು ಒಳಮೀಸಲಾತಿ ಜಾರಿಗಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 10 ಸಾವಿರ ಮಾದಿಗ ಸಮುದಾಯ ಜನಾಂಗ ಬರುತ್ತಿದ್ದು, ಅಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಚರ್ಚಿಸಲಾಯಿತು.
ಒಳ ಮೀಸಲಾತಿ ವಿಚಾರವಾಗಿ 2024ರ ಆ.1 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಕಳೆಯುತ್ತಿದೆ, ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಮಾಡದೆ, ಹಲವು ನೆಪಗಳನ್ನು ಹೇಳುತ್ತಾ, ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳು ಗತಿಸಿವೆ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ಭರವಸೆ ನೀಡಲಾಗಿತ್ತು, ಎರಡು ವರ್ಷ ಗತಿಸಿದರೂ, ಸರ್ಕಾರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ಹಿನ್ನೆಲೆ ಮಾದಿಗ ಸಮುದಾಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದೆ. ಒಳ ಮೀಸಲಾತಿ ಬಾರಿಯಾಗದಿದ್ದರೆ ಸರ್ಕಾರ ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ. ಈ ಕೂಡಲೇ ಒಳ ಮೀಸಲಾತಿ ಜಾರಿಗೋಳಿಸಬೇಕು, ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಬೇಕು, ಜಾರಿಯಾಗದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಯಾರಿಗೂ ಆಡಳಿತ ನಡೆಸುವುದಕ್ಕೆ ಬಿಡುವುದಿಲ್ಲ ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದು ಸಭೆಯಲ್ಲಿ ಎಚ್ಚರಿಸಲಾಯಿತು.
ಮೀಸಲಾತಿ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿ ಬಸವರಾಜ್ ದಡೇಸುಗೂರು ಕರೆ ನೀಡಿದರು.
ಸಭೆಯಲ್ಲಿ ಮರಳಸಿದ್ದ ಗದ್ದಿಗೆಪ್ಪ ಶ್ರೀಗಳು, ಮರಳುಸಿದ್ದೇಶ್ವರ ಶ್ರೀಗಳು, ಬಿಸರಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈರಪ್ಪ ಕೊಡುಗುಂಟೆ, ಗವಿಸಿದ್ದಪ್ಪ ಕಂದಾರಿ, ಗಣೇಶ್ ಹೊರತಟ್ನಾಳ, ಮಂಜುನಾಥ ಮುಸಲಾಪುರ, ಪರಶುರಾಮಪ್ಪ ಆನೆಗುಂದಿ,ಹನುಮೇಶ ಕಡೆಮನಿ, ಚನ್ನಬಸಪ್ಪ ಹೊಳೆಯಪ್ಪನವರ್, ದ್ಯಾಮಣ್ಣ ಚಾಮಲಾಪುರ್, ಮಲ್ಲು ಪೂಜಾರ, ಯಲ್ಲಪ್ಪ ಮುದ್ಲಾಪುರ, ಗಾಳೆಪ್ಪ ಹಿಟ್ನಾಳ, ನಿಂಗಪ್ಪ ಮೈನಲ್ಲಿ, ಜುಂಜಪ್ಪ ಮೆಲ್ಲಿಕೇರಿ, ಮಹಾಲಕ್ಷ್ಮಿ ಕಂದಾರಿ, ಹನುಮಂತ ಮ್ಯಗಳಮನಿ, ಪರಶುರಾಮ ಕೀಡದಾಳ, ಹನುಮಂತಪ್ಪ ಡಗ್ಗಿ, ರಾಮಣ್ಣ ಚೌಡಕಿ, ಸೇರಿದಂತೆ ನೂರಾರು ಮಾದಿಗ ಸಮುದಾಯದ ಯುವಕರು ಹಿರಿಯರು ಭಾಗವಹಿಸಿದ್ದರು.







