ಸಂಕಷ್ಟ ಸಮನ್ವಯ ಸೂತ್ರ ಮಾಡಿ ರೈತರಿಗೆ ನೀರು ಒದಗಿಸಿ: ದೊಡ್ಡಪ್ಪ ದೇಸಾಯಿ

ಕೊಪ್ಪಳ: ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಅನುಭವಿಸುವಂಥ ಸಮಸ್ಯೆ ರೈತರಿಗೆ ಎದುರಾಗಿದೆ. ತುಂಗಭದ್ರಾ ಜಲಾಶಯದ ನಮ್ಮ ಭಾಗದಲ್ಲಿ ಬರುವ ರೈತರ ಬೆಳೆಗಳಿಗೆ ಅನುಕೂಲವಾಗಲು ನೀರು ಒದಗಿಸಬೇಕು ಎಂದು ರೈತ ಮುಖಂಡ ಹಾಗೂ ಪಿ ಎಲ್ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಆಗ್ರಹಿಸಿದ್ದಾರೆ.
ನಗರದಲ್ಲಿರುವ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟ ಸಮನ್ವಯ ಸೂತ್ರ ಮಾಡಿ ರೈತರಿಗೆ ಅನುಕೂಲ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕು. ರೈತರ ಬೆಳೆಗಳಿಗೆ ನೀರು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಮಳೆ ಇಲ್ಲದೆ ನೀರಿನ ಕೊರತೆ ಇರುವುದು ಸಹಜ. ಮುಂಬರುವ ದಿನಗಳಲ್ಲಿ ದನ ಕರುಗಳಿಗೆ ಮೇವಿನ ಕೊರತೆ ಕೂಡ ಎದುರಾಗಬಹುದು. ಆಹಾರ ಧಾನ್ಯದ ಕೊರತೆ ಬರಬಹುದು. ಇದರಿಂದ ಆರ್ಥಿಕತೆಗೆ ಧಕ್ಕೆ ಉಂಟಾಗುತ್ತದೆ. ನೀರಿನ ಲಭ್ಯತೆಯ ಆಧಾರದ ಮೇರೆಗೆ ಎಷ್ಟು ಎಕರೆಗಳಿಗೆ ನೀರು ಕೊಡಬಹುದು ಎಂಬುದನ್ನು ಲೆಕ್ಕಾಚಾರ ಹಾಕಿಕೊಂಡು ರೈತರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ರೈತರಿಗೆ ಅನುಕೂಲತೆಗಳನ್ನು ದೊರಕಿಸಿಕೊಡಬೇಕು. ರೈತರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಲು ಸ್ಥಳೀಯ ಮಟ್ಟದಲ್ಲಿಯೇ ಸಭೆ ಕರೆದು ಚರ್ಚಿಸಬೇ.ಕು ಪದೇಪದೇ ನೀರಾವರಿ ಸಲಹಾ ಸಮಿತಿ ಬೆಂಗಳೂರಿನಲ್ಲಿ ಕರಿಯುವುದರಿಂದ ಈ ಭಾಗದ ರೈತರಿಗೆ ನ್ಯಾಯ ಸಿಗುವುದು ಕಷ್ಟ ಕಾರಣ ಜನಪ್ರತಿನಿಧಿಗಳು ಅತ್ಯಂತ ಮುತುವರ್ಜಿ ವಹಿಸಿ ರೈತರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಬೇಕೆಂದು ರೈತ ಮುಖಂಡ ದೊಡ್ಡಪ್ಪ ದೇಸಾಯಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಗಂಗಾವತಿಯ ಪ್ರಸಾದ ರೆಡ್ಡಿ, ಕಾರಟಗಿಯ ನಾಗಪ್ಪ ಸಿಂಗನಾಳ, ಚಂದ್ರಶೇಖರ್ ಗೋನಾಳ್ ಹೇರೂರು ,ಪಂಪಾಪತಿ ಕಾರಟಗಿ ಅನೇಕರಿದ್ದರು,






