ಜನಸಾಮಾನ್ಯರ ನೋವಿನ ಕುರಿತ ಸಾಹಿತ್ಯ ಬಹುಕಾಲ ನಿಲ್ಲುತ್ತದೆ: ದಾಮೋದರ ಮೌಝೋ

ಧಾರವಾಡ: ದನಿಯಿಲ್ಲದವರ, ಈ ಸಮಾಜದ ಅಂಚಿನಲ್ಲಿರುವ ಜನಸಾಮಾನ್ಯರ ಕುರಿತು ಬರೆದ ಸಾಹಿತ್ಯ ಬಹುಕಾಲ ನಿಲ್ಲುತ್ತದೆ. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಭಾರತೀಯ ಭಾಷೆಗಳ ನಡುವಿನ ಸೇತುವೆಯಾಗಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ ಎಂದು ಗೋವಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮೌಝೋ ಬಣ್ಣಿಸಿದ್ದಾರೆ.
ಅವರು ಪ್ರೊಗ್ರೆಸಿವ್ ಕಲ್ಚರಲ್ ಅಸೋಸಿಯೇಶನ್ ಆಫ್ ಇಂಡಿಯಾ (ಪಿಸಿಎಐ) ಸಂಘಟನೆಯು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ರವಿವಾರ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದ ಓರೆ-ಕೋರೆಗಳ ಕುರಿತು ನಮ್ಮ ಭಿನ್ನಮತವನ್ನು ದಾಖಲಿಸಲು ಬರೆಯಬೇಕು. ಇದರಿಂದ ಒಂದು ಹೊಸ ಎಚ್ಚರ ಮೂಡಲು ಸಾಧ್ಯ. ದೇಶದಲ್ಲಿ ಎಲ್ಲ ಭಾಷೆಗಳು ಶ್ರೇಷ್ಠವೇ. ಯಾವ ಭಾಷೆಯನ್ನೂ ನಾವು ತಿರಸ್ಕರಿಸಬಾರದು. ಆದರೆ ಯಾವುದೇ ಭಾಷೆಯ ಹೇರಿಕೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಯುವ ಲೇಖಕರು ತಮ್ಮ ಪರಂಪರೆಯ ಮೌಲ್ಯಗಳನ್ನು ಹೀರಿಕೊಂಡು ಹೊಸದನ್ನು ಕಟ್ಟಲು ಪ್ರಯತ್ನಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕಾವ್ಯದ ಕುರಿತು ಮಾತನಾಡಿದ ಬುಕ್ ಬ್ರಹ್ಮ ಸಂಚಾಲಕ ದೇವು ಪತ್ತಾರ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಆರೂವರೆ ದಶಕಗಳಿಂದ ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಾವ್ಯದ ವಿಶೇಷ ಗುಣವೆಂದರೆ ಪ್ರತಿಮೆಗಳು. ಪಟ್ಟಣಶೆಟ್ಟರ ಕಾವ್ಯವೆಂದರೆ ಒಂದು ರೀತಿ ಪ್ರತಿಮೆಗಳ ಸಮೂಹ. ಅವರ ಕವಿತೆಯಿಂದ ಕವಿತೆಗೆ ಬದಲಾವಣೆ, ಬೆಳವಣಿಗೆ ಎದ್ದು ಕಾಣುತ್ತದೆ. ಅಲ್ಲಿ ಕವಿತೆ ಕಟ್ಟುವ ಕಸುಬುದಾರಿಕೆ ಕಾಣುತ್ತದೆ ಎಂದರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಯಾವಾಗಲೂ ಅಧಿಕಾರ ಕ್ರೇಂದ್ರದಿಂದ ಅಂತರ ಕಾಯ್ದುಕೊಂಡು ಬಂದವರು. ಹಾಗಂತ ತಪ್ಪುಗಳು ಕಂಡಾಗ ಖಂಡಿಸದೇ ಕೂತವರಲ್ಲ ಎಂದು ಹೇಳಿದರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಗದ್ಯದ ಬಗ್ಗೆ ಲೇಖಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಕಂಡದ್ದನ್ನು ಬಿಡುಬೀಸಾಗಿ ಬರೆದಿರುವುದು, ಅನವಶ್ಯಕ ಹೊಗಳಿಕೆ ಮಾಡದೇ ತೆಗಳಲೂ ಹೋಗದೇ ಆಪ್ತವಾಗುವ ಗುಣ ಅವರ ಗದ್ಯ ಬರವಣಿಗೆಯಲ್ಲಿ ಕಾಣ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಕರ್ಮಿ, ಶಿರೀಷ್ ಜೋಶಿ ಪಟ್ಟಣಶೆಟ್ಟರ ರಂಗಸಾಹಿತ್ಯದ ಕುರಿತು ಮಾತನಾಡಿದರು.
ಅಭಿನಂದನೆ ಸ್ವೀಕರಿಸಿದ ಪಟ್ಟಣಶೆಟ್ಟಿ, ಯುವ ಲೇಖಕರು ಸತತ ಓದು ಬರವಣಿಗೆಯಿಂದ ಸಾಹಿತ್ಯದಲ್ಲಿ ಮುಂದುವರಿಯಬೇಕು. ಸಾಮಾನ್ಯ ಜನರ ಒಡನಾಟದಲ್ಲಿ ಬದುಕಿನ ಅನುಭವಗಳನ್ನು ದಾಖಲಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ, ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಪಟ್ಟಣಶೆಟ್ಟಿಯವರು ಸದಾ ನಮ್ಮ ಪ್ರಗತಿಪರ ಆಶಯದ ಕಾರ್ಯಕ್ರಮಗಳಿಗೆ ಬೆಂಬಲಿಸುತ್ತ ಬಂದಿದ್ದಾರೆ. ಯುವಜನತೆ ಹಿರಿಯರ ಸ್ಫೂರ್ತಿಯ ಮಾತುಗಳ ಆಶಯದಂತೆ ಸಾಂಸ್ಕೃತಿಕ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೇಮಾ ಪಟ್ಟಣಶೆಟ್ಟಿ, ಸುನೀತ ಕುಮಾರ್ ಶೆಟ್ಟಿ, ಅಲಕಾ ರಾವ್, ಕಳಕೇಶ್ ಎಸ್. ಉಪಸ್ಥಿತರಿದ್ದರು.
ಮಲ್ಲು ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಪಟ್ಟಣಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸುನಂದಾ ಕಡಮೆ, ವಿಠ್ಠಲ ದಳವಾಯಿ ಸಂವಾದ ನಡೆಸಿ ಕೊಟ್ಟರು.







