ಕೆಲಸದ ಅವಧಿಯಲ್ಲಿ ಕಛೇರಿ ಮುಚ್ಚಿ ಬಾಡೂಟದಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳು, ನೌಕರರು: ಆರೋಪ

ಗುಡಿಬಂಡೆ : ಫೆ 5 ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕೆಲಸದ ಅವಧಿಯಲ್ಲಿ ಕಛೇರಿ ಮುಚ್ಚಿ ಬಾಡೂಟ ಪಾರ್ಟಿಯಲ್ಲಿ ಭಾಗಿಯಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ವರ್ಲಕೊಂಡದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಂಗಳವಾರ ತಾಲೂಕು ಪಂಚಾಯಿತ್ತಿ ಕಾರ್ಯ ನಿರ್ವಾಹಕ ಅಧಿಕಾರಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗಾಗಿ ತಾಲೂಕು ಪಂಚಾಯಿತಿಯ ಅಧಿಕಾರಿಗಳು ನೌಕರರು ತಾಲೂಕಿನ ಎಲ್ಲಾ ಗ್ರಾಪಂಗಳ ಪಿಡಿಒಗಳು ಸಿಬ್ಬಂದಿ ವರ್ಗದವರು ಒಟ್ಟಿಗೆ ವರ್ಲಕೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಖಾಸಗಿ ಸ್ಥಳದಲ್ಲಿ ಸೇರಿ ಬಾಡು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಕಛೇರಿಯ ಸಮಯದಲ್ಲಿ ವರ್ಲಕೊಂಡ ಗ್ರಾ ಪಂ ನ ಎಲ್ಲಾ ಕೊಠಡಿಗಳನ್ನು ಮುಚ್ಚಿ ಅಧಿಕಾರಿಗಳು, ನೌಕರರು ಪಾರ್ಟಿಯಲ್ಲಿ ಭಾಗಿಯಾಗಿದ್ದು ಒಂದು ಕಡೆಯಾದರೆ, ಆ ಪಾರ್ಟಿಯಲ್ಲಿ ಭಾಗಿಯಾದ ತಾಲೂಕಿನ ಎಂಟು ಗ್ರಾಪಂಗಳ ಪಿಡಿಒಗಳು ಬಡ ಜನರ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.
ಬಾಡು ಪಾರ್ಟಿಯಲ್ಲಿ ಭಾಗಿಯಾಗಿ ಬಡ ಜನರ ಕೆಲಸಗಳನ್ನು ಮಾಡದೇ ಸರ್ಕಾರಿ ಕೆಲಸದ ವೇಳೆಯಲ್ಲಿ ಈ ರೀತಿಯಲ್ಲಿ ಕಾಲಹರಣ ಮಾಡಿದ್ದಾರೆ ಎನ್ನಲಾದ ಘಟನೆಯ ಈ ವಿಡಿಯೋಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.