ಕೃಷಿ ಭಾಗ್ಯ ಯೋಜನೆ; ರೈತರಿಗೆ ಶೇ 90ರಷ್ಟು ಸಬ್ಸಿಡಿ

ಸಾಂದರ್ಭಿಕ ಚಿತ್ರ | PC : freepik
ರೈತರು ಆರ್ಥಿಕವಾಗಿ ಸದೃಢರಾಗಿರಬೇಕು ಮತ್ತು ಕೃಷಿ ಚಟುವಟಿಕೆ ಸುಗಮವಾಗಿ ಸಾಗಬೇಕು ಎನ್ನುವ ಆಶಯದಲ್ಲಿ ಕೃಷಿ ಭಾಗ್ಯ ಯೋಜನೆ ತರಲಾಗಿದೆ.
ರಾಜ್ಯದ ರೈತರಿಗೆ ಕೃಷಿ ಕಾರ್ಯಗಳಿಗೆ ಅನುಕೂಲವಾಗುವಂತೆ ಮತ್ತು ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ತಡೆಯುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘ಕೃಷಿ ಭಾಗ್ಯ ಯೋಜನೆ’ಯನ್ನು ಜಾರಿಗೊಳಿಸುತ್ತಿದೆ.
ಯೋಜನೆಯಡಿ ರೈತರಿಗೆ ಸಿಗುವ ಸೌಲಭ್ಯಗಳು
ಅನೇಕ ಕೃಷಿ ಸೌಲಭ್ಯಗಳಿಗೆ ಸಹಾಯಧನ ಒದಗಿಸಲಾಗುತ್ತಿದ್ದು, ಅವುಗಳ ವಿವರ ಈ ಕೆಳಗಿನಂತಿದೆ:
► ಕೃಷಿ ಹೊಂಡ ಮತ್ತು ಬದು ನಿರ್ಮಾಣ: ಜಮೀನಿನಲ್ಲಿ ಹರಿದು ಹೋಗುವ ನೀರನ್ನು ಒಂದೆಡೆ ಕಲೆಹಾಕಲು ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬಹುದು.
► ಪಾಲಿಥಿನ್ ಹೊದಿಕೆ: ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ಬೇಗನೇ ಆವಿಯಾಗದಂತೆ ಹಾಗೂ ಭೂಮಿಯಲ್ಲಿ ಇಂಗಿಹೋಗದಂತೆ ತಡೆಯಲು ಉತ್ತಮ ಗುಣಮಟ್ಟದ ಪಾಲಿಥಿನ್ ಹೊದಿಕೆ ನೀಡಲಾಗುತ್ತದೆ.
► ಸುರಕ್ಷತಾ ತಂತಿ ಬೇಲಿ: ಹೊಂಡದಲ್ಲಿ ನೀರು ತುಂಬಿದ್ದಾಗ ಜಾನುವಾರುಗಳು, ಮಕ್ಕಳು ಅಥವಾ ರೈತರು ಆಕಸ್ಮಿಕವಾಗಿ ಕಾಲು ಜಾರಿ ಬೀಳದಂತೆ ತಡೆಯಲು ಹೊಂಡದ ಸುತ್ತಲೂ ಭದ್ರವಾದ ತಂತಿ ಬೇಲಿ ನಿರ್ಮಿಸಲು ಅವಕಾಶವಿದೆ.
► ಡೀಸೆಲ್ ಪಂಪ್ಸೆಟ್ ಖರೀದಿ: ಹೊಂಡದಲ್ಲಿ ಸಂಗ್ರಹಿಸಿದ ನೀರನ್ನು ಬೆಳೆಗಳಿಗೆ ಹರಿಸಲು ಅಗತ್ಯವಿರುವ ಡೀಸೆಲ್ ಎಂಜಿನ್ ಅಥವಾ ಪಂಪ್ಸೆಟ್ ಅನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.
► ಸಹಾಯಧನ: ರೈತರಿಗೆ ಕೃಷಿ ಹೊಂಡ ನಿರ್ಮಾಣ ಮತ್ತು ಇತರ ಸಾಧನಗಳ ಖರೀದಿಗೆ ತಗಲುವ ಬಹುಪಾಲು ವೆಚ್ಚವನ್ನು ಸರ್ಕಾರವೇ ಸಹಾಯಧನದ ರೂಪದಲ್ಲಿ ಭರಿಸುತ್ತದೆ. ಇದು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವಾಗಲಿದೆ.
► ಸಾಮಾನ್ಯ ವರ್ಗದ ರೈತರಿಗೆ: ಕೃಷಿ ಸಾಧನಗಳ ಒಟ್ಟು ವೆಚ್ಚದ ಶೇ 80ರಷ್ಟು ಸಹಾಯಧನವನ್ನು ಸರ್ಕಾರ ನೀಡುತ್ತದೆ.
► ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ರೈತರಿಗೆ: ಒಟ್ಟು ವೆಚ್ಚದ ಶೇ 90ರಷ್ಟು ಗರಿಷ್ಠ ಸಹಾಯಧನವನ್ನು ಒದಗಿಸಲಾಗುತ್ತದೆ.
ಅರ್ಹತಾ ಮಾನದಂಡಗಳು
ಈ ಯೋಜನೆಯಡಿ ಸರ್ಕಾರದ ಸೌಲಭ್ಯ ಪಡೆಯಲು ಬಯಸುವ ರೈತರು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕಾಗುತ್ತದೆ.
► ಅರ್ಜಿದಾರ ರೈತರು ಕನಿಷ್ಠ 1 ಎಕರೆ ಕೃಷಿ ಸಾಗುವಳಿ ಭೂಮಿಯನ್ನು ತಮ್ಮ ಹೆಸರಲ್ಲಿ ಹೊಂದಿರಬೇಕು.
► ರೈತರು ಸರ್ಕಾರದ ಕೃಷಿ ಇಲಾಖೆಯ ‘ಫ್ರೂಟ್ಸ್’ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಮತ್ತು ತಮ್ಮದೇ ಆದ ಫ್ರೂಟ್ಸ್ ಗುರುತಿನ ಚೀಟಿ ಹೊಂದಿರಬೇಕು.
► ಕೃಷಿ ಭಾಗ್ಯ ಯೋಜನೆಯಡಿ ಈ ಹಿಂದೆ ಕೃಷಿ ಹೊಂಡ ನಿರ್ಮಾಣಕ್ಕಾಗಿ ಅಥವಾ ಪಂಪ್ಸೆಟ್ಗಾಗಿ ಸರ್ಕಾರದ ಸಬ್ಸಿಡಿ ಪಡೆದಿರುವ ರೈತರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?
ಕೃಷಿ ಭಾಗ್ಯ ಯೋಜನೆಯ ಲಾಭ ಪಡೆಯಲು ಆಸಕ್ತಿ ಇರುವವರು ಜಮೀನಿನ ಇತ್ತೀಚಿನ ಪಹಣಿ (ಆರ್ಟಿಸಿ), ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಮೀಸಲಾತಿ ಕೋರುವವರು ಜಾತಿ ಪ್ರಮಾಣಪತ್ರವನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಎಲ್ಲ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೋಬಳಿಯ ‘ರೈತ ಸಂಪರ್ಕ ಕೇಂದ್ರ’ ಅಥವಾ ತಾಲೂಕಿನ ‘ಸಹಾಯಕ ಕೃಷಿ ನಿರ್ದೇಶಕರ ಕಚೇರಿ’ಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು.






