ಸರ್ವಪಕ್ಷ ಸಭೆಗೆ ಹೋಗುವುದಿಲ್ಲ : ಬಿ.ವೈ.ವಿಜಯೇಂದ್ರ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವುದಿಲ್ಲವೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಬೇಕು. ಅಲ್ಲಿವರೆಗೂ ಸರ್ವಪಕ್ಷ ಸಭೆಗೆ ತಾವು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರದಲ್ಲಿ ಶುಕ್ರವಾರ ಕೆಆರ್ಎಸ್ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಾವೇರಿ ಕೊಳ್ಳದ ರೈತರನ್ನು ಉಳಿಸಲು ಸರ್ವಪಕ್ಷ ಸಭೆ ಕರೆದಿಲ್ಲ. ಬದಲಾಗಿ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕರೆದಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರಕಾರದ ಇಂತಹ ಕಪಟ ನಾಟಕಕ್ಕೆ ವಿರೋಧ ಪಕ್ಷವಾದ ನಾವು ಹೊಣೆಯನ್ನು ಹೊರಲು ಸಿದ್ದರಿಲ್ಲ. ನನ್ನ ಮುಖ್ಯಮಂತ್ರಿ ಕುರ್ಚಿ ಹೋದರೂ ಪರವಾಗಿಲ್ಲ. ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಘೋಷಣೆ ಮಾಡಲಿ. ನಂತರ ಸಭೆಗೆ ಹೋಗುತ್ತೇವೆ. ಅಲ್ಲಿವರೆಗೆ ರೈತರ ಜತೆ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದರು.
ತಮಿಳುನಾಡಿನ ಮುಖ್ಯಮಂತ್ರಿ ಖುಷಿಪಡಿಸಲು ಕಳೆದ ಜೂನ್ ತಿಂಗಳಲ್ಲೇ ತಮಿಳುನಾಡಿಗೆ ಮೂರುವರೆ ಟಿಎಂಸಿ ನೀರು ಹರಿಸಿದ್ದೀರಿ. ಆಗ ಸರ್ವಪಕ್ಷ ಸಭೆ ಕರೆದಿದ್ದರ? ಈಗ ಕಪಟ ನಾಟಕವಾಡುತ್ತಿದ್ದಾರೆ. ರೈತರ ಪರವಾಗಿದ್ದೇವೆಂದು ಮೊಸಳೆ ಕಣ್ಣೀರು ಹಾಕುತ್ತಿದ್ದೀರಿ ಎಂದು ಅವರು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.






