ಸಿಂಧನೂರಿನಲ್ಲಿ ಅದ್ದೂರಿಯಾಗಿ ನಡೆದ ಮಿಲಾದುನ್ನಬಿ ಆಚರಣೆ; ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆ

ಸಿಂಧನೂರು: ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನಾಚರಣೆ ಜಶ್ನೇ ಮಿಲಾದುನ್ನಬಿ ಬುಧವಾರ ಮುಸ್ಲಿಂ ಬಾಂಧವರು ನಗರದಲ್ಲಿ ಅದ್ದೂರಿಯಾಗಿ ಆಚರಿಸಿದರು.
ನಗರದ ಮಹಿಬೂಬಿಯಾ ಕಾಲೋನಿಯ ನೂರಾನಿ ಮಸ್ಜಿದ್ನಲ್ಲಿ ಈದ್ ಆಚರಣಾ ಸಮಿತಿಯಿಂದ ಮೆರವಣಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಸಿಂಧನೂರು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಶಾಂತಿ, ಸೌಹಾರ್ದತೆ, ಮಾನವೀಯತೆಯಿಂದ ಹಬ್ಬ ಆಚರಿಸುವ ಮೂಲಕ ಮಾದರಿ ಸಿಂಧನೂರು ನಿರ್ಮಿಸಲು ಎಲ್ಲರೂ ಪಣತೊಡಬೇಕು. ಪ್ರವಾದಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮೌಲ್ಯಯುತ ಜೀವನ ನಡೆಸಬೇಕು ಎಂದರು.
ಜೆಡಿಎಸ್ ಯುವ ಮುಖಂಡ ಅಭಿಷೇಕ ನಾಡಗೌಡ ಮಾತನಾಡಿ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿ ಮೂಡಿದಾಗ ಮಾತ್ರ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ. ಮಹನೀಯರ ಜೀವನದ ಸಂದೇಶಗಳನ್ನು ಪಾಲಿಸಿ, ಶಾಂತಿಯಿಂದ ಬದುಕು ಸಾಗಿಸಬೇಕು ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷ ಟಿ. ಹುಸೇನ್ ಸಾಬ್, ಹಿರಿಯ ಮುಖಂಡ ಹೆಚ್. ಎನ್. ಬಡಿಗೇರ, ಮೌಲಾನಾ ಹಾಫಿಝ್ ಮೆಹರಾಜ್ ಮೌಲಾನಾ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಜುಗೌಡ ಬಾದರ್ಲಿ, ಮುಖಂಡರಾದ ಸೈಯದ್ ಬಾಬರ್ ಪಾಷಾ ವಕೀಲ, ಮಹ್ಮದ್ ಅಲ್ತಾಪ್ ಸಾಹುಕಾರ್, ಖಾಜಿಮಲಿಕ್ ವಕೀಲ, ಸೈಯದ್ ಹಾರೂನ್ ಸಾಹೇಬ್, ಹಾಜಿಮಸ್ತಾನ್, ಮೆಹೆಬೂಬ್ ಖಾನ್ ಸಾಬ್, ಶಿವು ಪಾಟೀಲ್ ಗುಂಜಳ್ಳಿ ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಸಮಾಜಗಳ ಮುಖಂಡರು ಇದ್ದರು.
ಭವ್ಯ ಮೆರವಣಿಗೆ:
ನಗರದ ಮಹಿಬೂಬಿಯಾ ಕಾಲೋನಿಯ ನೂರಾನಿ ಮಸೀದಿಯಲ್ಲಿ ಹಸಿರು ಧ್ವಜಸ್ತಂಭಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಹೂವು ಮುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಂಚರಿಸಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಕೋಟೆ ಪ್ರದೇಶದ ಕಿಲ್ಲಾ ಮಸೀದಿಯನ್ನು ತಲುಪಿತು. ಮೆರವಣಿಗೆಯಲ್ಲಿ ಮಕ್ಕಾ–ಮದೀನಾ, ಅಲ್ಲಾಹು ಹೆಸರಿನ ಸ್ತಬ್ಧ ಚಿತ್ರಗಳನ್ನು ಭವ್ಯವಾಗಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಗಮನಸೆಳೆದ ಕೇಸರಿ, ಬಿಳಿ, ಹಸಿರು ಬಣ್ಣದ ಅಲ್ಲಾಹು ಸ್ತಬ್ಧ ಚಿತ್ರ...
ನಗರದ ಜನತಾ ಕಾಲೋನಿಯ ಯುವಕರು ತಯಾರಿಸಿದ್ದ ಕೇಸರಿ, ಬಿಳಿ ಹಾಗೂ ಹಸಿರು ರಾಷ್ಟ್ರಧ್ವಜದ ಬಣ್ಣದ ‘ಅಲ್ಲಾಹು’ ಪದದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಗಮನಸೆಳೆಯಿತು. ದೇಶಪ್ರೇಮದ ಸಂದೇಶ ಸಾರುವ ಸ್ತಬ್ಧ ಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.






