ಕಾಂಗ್ರೆಸ್ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯ ಮಾಡುತ್ತಿದೆ : ಸುಹೈಲ್ ಅಹ್ಮದ್ ಮರೂರು

ಮೈಸೂರು : ನೂತನ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಒಂದು ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪ್ರತಿಪಾದನೆ ಹೆಸರಿನಲ್ಲೇ ದೊಡ್ಡ ರಾಜಕೀಯ ಅನ್ಯಾಯ ಮಾಡಿದೆ ಎಂದು ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ವಕ್ತಾರ ಸುಹೈಲ್ ಅಹ್ಮದ್ ಮರೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ರಾಜಕೀಯವಾಗಿ ಮುಸ್ಲಿಮ್ ಸಮುದಾಯ ಮತ್ತು ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ನೂತನ ಸಚಿವ ಸಂಪುಟದಲ್ಲಿ ಓರ್ವ ಮಹಿಳೆಯರಿಗೂ ಅವಕಾಶ ನೀಡಿಲ್ಲ, ವಿಧಾನಪರಿಷತ್ ಗೆ ಆಯ್ಕೆಯಾದ ನಾಲ್ವರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಒಂದು ರೀತಿಯಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಎಂಬ ಭಾವನೆ ಅವರಲ್ಲಿ ಇರಬಹುದು. ಇಂತಹ ಧೋರಣೆಯನ್ನು ಮುಸ್ಲಿಮರು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ 2023ರಲ್ಲಿ ಪಡೆದ ಒಟ್ಟು ಮತಗಳಲ್ಲಿ ಮೂರನೇ ಒಂದರಷ್ಟು ಮತಗಳು ಮುಸ್ಲಿಮರು ನೀಡಿದ್ದಾರೆ. ಅಂತಹದರಲ್ಲಿ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬ ಮುಸ್ಲಿಮರಿಗೆ ಸಚಿವ ಸ್ಥಾನ ನೀಡಿರುವುದು ಅನ್ಯಾಯವಾಗಿದೆ. ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಕಳೆದ ಮೇ.16 ರಂದು ಬೆಂಗಳೂರಿನಲ್ಲಿ ಸಮಾವೇಶ ಮಾಡಿ ಕಾಂಗ್ರೆಸ್ ಸರಕಾರ ಹೇಳಿದ್ದೇನು, ಮಾಡಿದ್ದೇನು, ಮುಂದೇನು ಎಂಬ ವರದಿಯನ್ನು ಬಿಡುಗಡೆ ಮಾಡಿ ಸರಕಾರದ ಮುಂದಿಟ್ಟಿತ್ತು. ನಮ್ಮ ಹತ್ತು ಬೇಡಿಕೆಗಳಲ್ಲಿ ರಾಜಕೀಯ ಸ್ಥಾನಮಾನ ನೀಡುವುದು ಒಂದಾಗಿತ್ತು. ಆದರೆ ರಾಜಕೀಯವಾಗಿಯೂ ನಮಗೆ ನ್ಯಾಯಯುತ ಸ್ಥಾನ ಸಿಕ್ಕಿಲ್ಲ ಎಂದು ಹೇಳಿದರು.
ದಾವಣಗೆರೆ ಉಪ ಚುನಾವಣೆ ನಂತರ ಮುಸ್ಲಿಮರಲ್ಲಿ ವ್ಯಾಪಕ ಆಕ್ರೋಶವಿದೆ. 2023ರ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಾಗಿ ಮತ ಹಾಕಿರುವುದು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲದ್ದೇನು ಅಲ್ಲ. ಆದರೂ ಅನ್ಯಾಯ ಮಾಡಲಾಗುತ್ತಿದೆ. ಮುಸ್ಲಿಮರಿಗೆ ಏನು ಮಾಡದಿದ್ದರೂ ಅವರು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬ ಭ್ರಮೆ ಕಾಂಗ್ರೆಸ್ಸಿಗರಲ್ಲಿ ಇರಬಹುದು, ಆದರೆ ಮುಸ್ಲಿಮ್ ಸಮುದಾಯ ತಮ್ಮ ಅಸ್ತಿತ್ವಕ್ಕೆ ತಮಗೆ ಬೇಕಾದ ಮಾರ್ಗಗಳನ್ನು ಕಂಡುಕೊಳ್ಳುತ್ತವೆ ಎಂದು ಹೇಳಿದ್ದಾರೆ.






