ಮೈಸೂರು | ಎಸ್.ವೈ.ಎಸ್ ನಿಂದ ವರ್ಷಪೂರ್ತಿ ʼಮೀಲಾದ್ 1500ʼ ಕಾರ್ಯಕ್ರಮ

ಮೈಸೂರು : ಪ್ರವಾದಿ ಮುಹಮ್ಮದ್ (ಸ) ರವರ ಸಂದೇಶಗಳು ಒಂದು ನಿರ್ದಿಷ್ಟ ಸ್ಥಳ, ಕಾಲ ಅಥವಾ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಬದಲು ಎಲ್ಲ ಕಾಲಕ್ಕೂ ಪ್ರಾಯೋಗಿಕವಾದ, ವಿಶ್ವದಾದ್ಯಂತ ಇರುವ ಪ್ರತಿಯೊಂದು ಸಮುದಾಯಕ್ಕೂ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯವಾಗುವ ಸಾರ್ವತ್ರಿಕ ಸಂದೇಶಗಳಾಗಿತ್ತು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್.ವೈ.ಎಸ್)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಹೇಳಿದರು.
ಎಸ್.ವೈ.ಎಸ್ 'ಮೀಲಾದ್ 1500' ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರವಾದಿಯವರ 1500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಸಾರ್ವತ್ರಿಕ ದರ್ಶನದ ಪ್ರವಾದಿ' ಎಂಬ ಘೋಷಣೆಯೊಂದಿಗೆ ವರ್ಷ ಪೂರ್ತಿ 'ಮೀಲಾದ್ 1500' ಆಚರಿಸಲಿದೆ ಎಂದು ತಿಳಿಸಿದರು.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಶಾಫಿ ನಈಮಿ ತಂಙಳ್ ಮಾರ್ನಳ್ಳಿ, ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಹಾಮೀಂ ತಂಙಳ್ ಬಾಳೆಹೊನ್ನೂರು ಪ್ರಾರ್ಥಿಸಿದರು.
ಹಾಫಿಝ್ ಸಾದಿಕ್ ಅಲೀ ಫಾಳಿಲಿ ಗೂಡಲ್ಲೂರು ಮೌಲಿದ್ಗೆ ನೇತೃತ್ವ ನೀಡಿದರು. ಖ್ಯಾತ ಗಾಯಕ ಮುಈನುದ್ದೀನ್ ಬೆಂಗಳೂರು ನಾತ್ ಹಾಡಿದರು.
ಇದಕ್ಕೂ ಮುನ್ನ ಮಸ್ಜಿದೆ ಆಜಂ ಮರ್ಕಝ್ ಅಹ್ಲೆ ಸುನ್ನತ್ ಮಸೀದಿಯಿಂದ ಅಶೋಕ ರಸ್ತೆ, ಫೌಂಟೇನ್ ಸರ್ಕಲ್, ಹಝ್ರತ್ ಟಿಪ್ಪು ಸುಲ್ತಾನ್ ಸರ್ಕಲ್ ಮೂಲಕ ಹಾದು ಮಿಲೇನಿಯಂ ಸರ್ಕಲ್ ತನಕ ಜಾಥಾ ನಡೆಸಿ, ಮಸ್ಜಿದ್ ಇ ಅಜ್ಜು ಕೆಸರೆಯಲ್ಲಿ ಸಮಾರೋಪಗೊಂಡಿತು.
ಸರ್ ಖಾಝಿ ಮುಹಮ್ಮದ್ ಉಸ್ಮಾನ್ ಶರೀಫ್ ಸಾಹೇಬ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜನಾಬ್ ಅಝೀಝ್ ಅಜ್ಜು, ಮೌಲಾನಾ ಶಬೀರ್ ಹಸನ್ ಹಶ್ಮತಿ, ಖಾರೀ ಇನಾಯತ್ ರಹ್ಮಾನ್ ರಝ್ವಿ, ಹಾಫಿಝ್ ಒ ಖಾರಿ ಅಬ್ದುಲ್ ಹನ್ನಾನ್ ನಕ್ಷಬಂದಿ, ಅಬ್ದುಲ್ ಸಲಾಂ ರಝ್ವಿ, ಎಸ್.ವೈ.ಎಸ್ ರಾಜ್ಯ ಪದಾಧಿಕಾರಿಗಳಾದ ಮನ್ಸೂರ್ ಕೋಟೆಗದ್ದೆ, ಹಫೀಳ್ ಸಅದಿ ಮಡಿಕೇರಿ, ಖಲೀಲ್ ಮಾಲಿಕಿ, ಅಬ್ದುಲ್ ರಹ್ಮಾನ್ ರಝ್ವಿ, ಹಸೈನಾರ್ ಆನೆಮಹಲ್, ಅಡ್ವೊಕೇಟ್ ಹಂಝತ್, ಇಬ್ರಾಹೀಂ ಸಖಾಫಿ ಪಯೋಟ, ಶಾಹುಲ್ ಹಮೀದ್ ಮದದಿ, ರಾಜ್ಯ ಸದಸ್ಯರಾದ ಅತಾವುಲ್ಲಾ ಮೈಸೂರು, ನಾಸಿರ್ ಕ್ಲಾಸಿಕ್, ಅಶ್ರಫ್ ಎರ್ಮಾಡ್, ಅನಸ್ ಸಿದ್ದೀಖಿ, ಅಹ್ಮದ್ ಮದನಿ ಕೊಡಗು ಮತ್ತಿತರರು ಉಪಸ್ಥಿತರಿದ್ದರು.







