ಮೈಸೂರು ಜಿಲ್ಲೆಯ 6 ಮಂದಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಮೈಸೂರು : 2025ನೇ ವಾರ್ಷಿಕ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರು ಜಿಲ್ಲೆಯ ಆರು ಮಂದಿಗೆ ʼರಾಜ್ಯೋತ್ಸವ ಪ್ರಶಸ್ತಿʼ ಲಭಿಸಿದೆ.
ಮಾಧ್ಯಮ ಕ್ಷೇತ್ರ: ಅಂಶಿ ಪ್ರಸನ್ನಕುಮಾರ್, ನೃತ್ಯ: ಪ್ರೊ.ಕೆ.ರಾಮಮೂರ್ತಿ ರಾವ್, ಕ್ರೀಡೆ: ಎಂ.ಯೋಗೇಂದ್ರ, ಜಾನಪದ: ಉಡಿಗಾಲ ಮಹದೇವಪ್ಪ, ಕರಕುಶಲ: ಹೇಮಾ ಶೇಖರ್ ಮತ್ತು ಶಿಕ್ಷಣ: ಪ್ರೊ.ಎನ್.ಎಸ್.ರಾಮೇಗೌಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂಶಿ ಪ್ರಸನ್ನಕುಮಾರ್ :
ಮೈಸೂರಿನ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ʼರಾಜ್ಯೋತ್ಸವ ಪ್ರಶಸ್ತಿʼಗೆ ಭಾಜನರಾಗಿದ್ದಾರೆ. ಅವರು ಕಳೆದ ನಾಲ್ಕು ದಶಕಗಳಿಂದಲೂ ಮೈಸೂರು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಎಂಭತ್ತರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಅವರು 'ಆಂದೋಲನ' ಪತ್ರಿಕೆಯ ಮೂಲಕ ಪ್ರಸಿದ್ಧಿಗೆ ಬಂದವರು. ಸತ್ಯದೇವ್ ಕೊಲೆ ಪ್ರಕರಣ, ವೀರಪ್ಪನ್ ಕುಕೃತ್ಯಗಳ ವರದಿಗಳು ಮಾತ್ರವಲ್ಲದೇ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅವರು ಮಾಡುತ್ತಿದ್ದ ವರದಿಗಳು ಬಹುಬೇಗ ಅವರನ್ನು ಜನಪ್ರಿಯಗೊಳಿಸಿದವು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರೊ.ಕೆ.ರಾಮಮೂರ್ತಿರಾವ್:
ಪ್ರೊ.ಕೆ.ರಾಮಮೂರ್ತಿರಾವ್ ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಿಕಟ್ಟೆ ಎಂಬ ಗ್ರಾಮದಲ್ಲಿ. ಬೆಳೆದಿದ್ದು ಮತ್ತು ವ್ಯಾಸಂಗ ಮಾಡಿದ್ದು ಮೈಸೂರಿನಲ್ಲಿ. ವೃತ್ತಿಯಲ್ಲಿ ಜೆ.ಎಸ್.ಎಸ್ ವಿದ್ಯಾಪೀಠದ ವಿವಿಧ ಕಾಲೇಜುಗಳಲ್ಲಿ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಅಧ್ಯಾಪನ. ನಂತರ 3 ವರ್ಷ ಪ್ರಾಂಶುಪಾಲರಾಗಿ ನಂಜನಗೂಡಿನಲ್ಲಿ ಸೇವೆ. ಈಗ ನಿವೃತ್ತರಾಗಿದ್ದಾರೆ.
ಪ್ರವೃತ್ತಿಯಲ್ಲಿ ಭರತನಾಟ್ಯ ಕಲಾವಿದರು . ಭರತನಾಟ್ಯವನ್ನು ನಾಟ್ಯಾಚಾರ್ಯ ಎಂ.ವಿಷ್ಣು ದಾಸ್ ಅವರಿಂದ ಕಲಿತು ಜೂನಿಯರ್, ಸೀನಿಯರ್, ವಿದ್ವತ ಈ ಎಲ್ಲಾ ಪರೀಕ್ಷೆಗಳಲ್ಲೂ ರ್ಯಾಂಕ್ ವಿಜೇತರು. ಕಳೆದ 40 ವರ್ಷಗಳಿಂದ ಮೈಸೂರಿನಲ್ಲಿ" ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್" ಎಂಬ ಸಂಸ್ಥೆಯನ್ನು ಆರಂಭಿಸಿ ಮೈಸೂರು, ಧಾರವಾಡ, ಹುಬ್ಬಳ್ಳಿ, ರಾಣಿಬೆನ್ನೂರು ಮುಂತಾದ ಕಡೆಗಳಲೆಲ್ಲಾ ಸಂಚರಿಸಿ ನೃತ್ಯ ಪಾಠ ಮಾಡಿ ನೂರಾರು ಶಿಷ್ಯರನ್ನು ರೂಪಿಸಿ ನೃತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅವರಲ್ಲಿ ಹಲವರು ರಾಜ್ಯದೊಳಗೆ ಹಾಗೂ ವಿದೇಶಗಳಲ್ಲೂ ತಮ್ಮದೇ ಆದ ಸ್ವಂತ ನೃತ್ಯ ಶಾಲೆಗಳನ್ನು ನಡೆಸುತ್ತಿದ್ದಾರೆ.
ಎಂ.ಯೋಗೇಂದ್ರ:
ಮೈಸೂರು ನಗರದ ವಿಜಯನಗರ ಎರಡನೇ ಹಂತದ ನಿವಾಸಿಯಾದ ಎಂ.ಯೋಗೇಂದ್ರ ಅಂತರಾಷ್ಟ್ರೀಯ ಕ್ರೀಡಾಪಟು, ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬಿಸ್ಸಿ ಪದವೀಧರರಾದ ಇವರು ಸೆಂಟ್ರಲ್ ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 5000 ಮೀಟರ್ ಓಟ, 10000 ಮೀಟರ್, 2000/3000 ಮೀಟರ್ ಸ್ಟೀಪಲ್ಸ್ ಚೇಸ್, 1500 ಮೀಟರ್ ಓಟ, ಕ್ರಾಸ್ ಕಂಟ್ರಿ ಓಟಗಾರ.
ಪ್ರೌಢಶಾಲೆ ಶಿಕ್ಷಣದಿಂದಲೇ ಅಥ್ಲೆಟಿಕ್ಸ್ನಲ್ಲಿ ಆಸಕ್ತಿ ತೋರಿದ ಅವರು ಅಂತರ ಶಾಲೆ, ಅಂತರ ಕಾಲೇಜು ಮತ್ತು 5 ಬಾರಿ ವಿಶ್ವವಿದ್ಯಾನಿಲಯ 6 ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪದಕ ವಿಜೇತರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ, ರಾಜ್ಯಮಟ್ಟದ ಅಥ್ಲೆಟಿಕ್ಸ್ ಹಾಗೂ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಬೆಳ್ಳೆ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ. 1984ರಲ್ಲಿ ಕರ್ನಾಟಕ ಹಾಗೂ ಗೋವಾ ಎನ್.ಸಿ.ಸಿ ತಂಡದಿಂದ ಆಯ್ಕೆಯಾಗಿ ನವ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಎನ್ಸಿಸಿ ಪೆರೇಡ್ ನಲ್ಲಿ ಭಾಗವಹಿಸಿದ್ದರು.
ಏಪ್ರಿಲ್ 2003ರಲ್ಲಿ ಮಣಿಪುರದ ಇಂಪಾದಲ್ಲಿ ನಡೆದ 24ನೇ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಕರ್ನಾಟದ ರಾಜ್ಯದಿಂದ ತಾಂತ್ರಿಕ ಅಧಿಕಾರಿಯಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಉಡಿಗಾಲ ಮಹದೇವಪ್ಪ:
ಮೂಲತಃ ಚಾಮರಾಜನಗರ ಜಿಲ್ಲೆ ಉಡಿಗಾಲ ಗ್ರಾಮದವರಾದ ಮಹದೇವಪ್ಪ, ಮೈಸೂರಿನ ಗೌರಶಂಕರ ನಗರದಲ್ಲಿ ಕಳೆದ 45 ವರ್ಷಗಳಿಂದ ನೆಲೆಸಿ ವಾಸವಾಗಿದ್ದಾರೆ. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿರುವ ಇವರು ಜೆ.ಎಸ್.ಎಸ್ ಸಂಸ್ಥೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಜಾನಪದ ಕಲೆ, ರಂಗಭೂಮಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ 66 ವರ್ಷಗಳಿಂದಲೂ ತೊಡಗಿಸಿಕೊಂಡಿದ್ದಾರೆ. 66 ವರ್ಷಗಳಿಂದ ನಂದೀ ಧ್ವಜ ಕುಣಿತ ಹಾಗೂ ಧಾರ್ಮಿಕ ಪರಂಪರೆಯ ಮಾಹಿತಿಯ ಪ್ರಚಾರಕನಾಗಿ ಹಾಗೂ ಸಾಂಸ್ಕೃತಿಕ ಉಳಿವಿಗಾಗಿ ಹೋರಾಟ ಹಾಗೂ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಮಾಡುತ್ತಾ, ತಮ್ಮ ನೆಲಗಟ್ಟಿನ ಕಲೆಯಾದ ನಂದೀ ಧ್ವಜದ ಕಲೆಯನ್ನು ಯುವ ಕಲಾವಿದರಿಗೆ ತರಬೇತಿ ನೀಡಿ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಹೇಮಾ ಶೇಖರ್:
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಹೇಮಾಶೇಖರ್ ಅವರು ಕರಕುಶಲ ಕಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೇಮಾಶೇಖರ್ ಅವರು ಪ್ರಕೃತಿ, ಪ್ರಾಣಿ ಮತ್ತು ಪಕ್ಷಿಗಳ ಕಲೆಗಳನ್ನು ನುರಿತ ಕಲಾವಿದರಾದ ಸೂಫಿ, ಮತ್ತು ಮೈಸೂರು ವರ್ಣ ಕಲೆಯನ್ನು ಮೈಸೂರು ಅರಮನೆ ಕಲಾವಿದರಾದ ರಾಮನರಸಯ್ಯನವರಿಂದ ಕಲಿತಿದ್ದಾರೆ.
ಡ್ರಾಯಿಂಗ್ ಮತ್ತು ವರ್ಣ ಕಲೆಗಳನ್ನು ಇತರ ನುರಿತ ಕಲಾವಿದರು ಮತ್ತು ಶ್ರಮಿಕ ವಿದ್ಯಾಪೀಠ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ತರಬೇತಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೇಂದ್ರ ಸರಕಾರದ ಜವಳಿ ಮಂತ್ರಾಲಯದ 2014ನೇ ಸಾಲಿನ ಶಿಲ್ಪಗುರು ರಾಷ್ಟ್ರ ಪ್ರಶಸ್ತಿ, ಕೇಂದ್ರ ಸರಕಾರದ ಜವಳಿ ಮಂತ್ರಾಲಯದ 2002ನೇ ಸಾಲಿನ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಸರ್ಕಾರದ 2003ನೇ ಸಾಲಿನ ಕಿತ್ತೂರು ರಾಣಿ ಪ್ರಶಸ್ತಿ,ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಡಾ.ಎನ್.ಎಸ್.ರಾಮೇಗೌಡ :
ಡಾ.ಎನ್.ಎಸ್.ರಾಮೇಗೌಡ ಎಂಎಸ್ಸಿ, ಪಿಎಚ್.ಡಿ.ಪಧವೀದರರು, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಿವೃತ್ತಿ ಹೊಂದಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಜನಿಸಿದ ಅವರು, ಮೈಸೂರಿನ ರಾಮಕೃಷ್ಣನಗರದಲ್ಲಿ ವಾಸವಾಗಿದ್ದಾರೆ.







