ಕನ್ನಡ ಚಿತ್ರರಂಗ, ಭಾಷೆಯ ಹಿತರಕ್ಷಣೆಗೆ ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ

ಮೈಸೂರು : ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಹಾಗೂ ಭಾಷೆಯ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿ ಹಾಗೂ ಸಬ್ಸಿಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ 2018 ಹಾಗೂ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಮೊದಲಿನಂತೆ ಮೌಲ್ಯಯುತ, ಸಾಮಾಜಿ ಕಳಕಳಿ ಇರುವ ಚಿತ್ರಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಸಿನಿಮಾ ಪ್ರಭಾಶಾಲಿ ಮಾಧ್ಯಮ. ಜನರು ಹಾಗೂ ಸಮಾಜದಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.
ಹಿಂದೆ ನಾಯಕ ನಟರು ಆದರ್ಶವಾಗಿದ್ದರು. ಜನರು ಅವರಂತೆ ಬದುಕು ರೂಪಿಸಿಕೊಳ್ಳುತ್ತಿದ್ದರು. ನಟರು ಪರದೆಯಲ್ಲಿ ಇರುವಂತೆಯೇ ನಿಜ ಜೀವನದಲ್ಲಿಯೂ ನಡೆದುಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗುತ್ತೀರಿ ಎಂದರು.
ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ:
ಸರಕಾರ ಚಿತ್ರೋದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹಿಸಲು ಸಬ್ಸಿಡಿ ನೀಡಲಾಗುತ್ತಿದೆ. ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡಲು ಸರಕಾರ ಹಿಂದೇಟು ಹಾಕುವುದಿಲ್ಲ; ಆದರೆ ಸಬ್ಸಿಡಿಗಾಗಿ ಸಿನಿಮಾ ನಿರ್ಮಾಣ ಮಾಡದೇ ಸಮಾಜಮುಖಿ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿವಿಮಾತು ಹೇಳಿದರು.
ಚಲನಚಿತ್ರಗಳ ಸಬ್ಸಿಡಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಆಯಾ ವರ್ಷದಲ್ಲಿಯೇ ಸಬ್ಸಿಡಿ ನೀಡಲು ಕ್ರಮ ವಹಿಸಲಾಗುವುದು ಎಂದರು.
ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ:
ಮೈಸೂರು ನಗರದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ 160 ಎಕರೆ ಪ್ರದೇಶವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಡಿಪಿಆರ್ ಪೂರ್ಣಗೊಳಿಸಿದ ಬಳಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಹೈದ್ರಾಬಾದ್ ಫಿಲಂ ಸಿಟಿಯಂತೆ ಮೈಸೂರಿನಲ್ಲಿ ಚಿತ್ರನಗರಿಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದರು.
ಮೈಸೂರು ಸಾಂಸ್ಕೃತಿಕ ನಗರ ಎಂದು ಕರೆಯಲಾಗುತ್ತದೆ. ನಗರದಲ್ಲಿ 2018 ಹಾಗೂ 2019ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿಂದಿನ ಸರಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ 2018 ಹಾಗೂ 2019ರ ಪ್ರಶಸ್ತಿ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ 2021ನೇ ಸಾಲಿನ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಇನ್ನು ಮುಂದೆ ಈ ರೀತಿ ವಿಳಂಬವಾಗಲು ಅವಕಾಶ ನೀಡುವುದಿಲ್ಲ. ಆಯಾ ಸಾಲಿನಲ್ಲಿಯೇ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತೇವೆ. ಐದಾರು ವರ್ಷ ವಿಳಂಬವಾಗಿ ಪ್ರಶಸ್ತಿ ನೀಡಿದರೆ ಅರ್ಥವಿರುವುದಿಲ್ಲ ಎಂದು ಹೇಳಿದರು.
2018 -19 ನೇ ಸಾಲಿನ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಡಾ.ವಿಷ್ಣುವರ್ಧನ್ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ಕೂಡ ಅಭಿನಂದನೆ ಸಲ್ಲಿಸಿದರು.
ಸ್ಮರಣಸಂಚಿಕೆ ಲೋಕಾಪರ್ಣೆ:
2018 ಹಾಗೂ 2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತ ನಟರು, ನಟಿಯರು, ನಿರ್ದೇಶಕರು, ಸಂಭಾಷಣೆಕಾರರು, ಛಾಯಾಗ್ರಾಹಕರು, ಗೀತರಚನೆಕಾರರು, ಹಿನ್ನೆಲೆ ಗಾಯಕರು, ಕಲಾ ನಿರ್ದೇಶಕರು ಸೇರಿದಂತೆ ಎಲ್ಲ ಕಲಾವಿದರನ್ನು ಪರಿಚಯಿಸುವ ಸ್ಮರಣಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿದರು.
ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಶಾಸಕರಾದ ರವಿಶಂಕರ್, ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಶಿವಕುಮಾರ್ ಕೆ., ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್,ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ.ಕಾವೇರಿ, ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ನಟಿ ಉಮಾಶ್ರೀ, ನಟ-ನಿರ್ದೇಶಕರಾದ ರಿಷಬ್ ಶೆಟ್ಟಿ, ಹಂಸಲೇಖ, ರಾಜೇಂದ್ರ ಸಿಂಗ್ ಬಾಬು, ರಾಘವೇಂದ್ರ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ವಿ.ಹರಿಕೃಷ್ಣ, ಜೆ.ಕೆ.ಶ್ರೀನಿವಾಸ್ ಮೂರ್ತಿ,ಪಿ.ಶೇಷಾದ್ರಿ, ಬಿ.ಎಸ್.ಬಸವರಾಜ್, ರಿಚರ್ಡ್ ಕ್ಯಾಸ್ಟಲಿನೋ, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ದಿಗ್ಗಜರು, ನೂರಾರು ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.







