ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ಮೈಸೂರು: ರಾಜ್ಯದಲ್ಲಿ ನಡೆಯುವ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲ್ಲಲಿದೆ. ನಾನು ಎರಡೂ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುತ್ತೇನೆ. ಮಾಚ್೯ 30 ಮತ್ತು 31, ಬಾಗಲಕೋಟೆ, ಎಪ್ರಿಲ್ 1 ಮತ್ತು 2 ದಾವಣಗೆರೆ, 3 ಮತ್ತು 4 ರಂದು ಬಾಗಲಕೋಟೆ, 6 ರಂದು ಬಾಗಲಕೋಟೆ ಅಥವಾ ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲಾ ಗೊಂದಲಗಳೂ ಸರಿಯಾಗಿದೆ. ನಾವೇ ಗೆಲ್ಲುತ್ತೇವೆ ಎಂದರು. ಈ ಚುನಾವಣೆಯಲ್ಲ ಮುಂಬರುವ 2028 ರ ಚುನಾವಣೆಯನ್ನೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.
ಉಪಚುನಾವಣೆಗೂ ಮುಖ್ಯಮಂತ್ರಿ ಸ್ಥಾನಕ್ಕೂ ಸಂಬಂಧ ಇಲ್ಲ, ನಮ್ಮಲ್ಲಿ ಹೈಕಮಾಂಡ್ ಎಂಬುದು ಇದೆ. ಅದು ಏನು ಹೇಳುತ್ತದೆ ಅದನ್ನು ಕೇಳುತ್ತೇವೆ. ಹೈಕಮಾಂಡ್ ಅನುಮತಿ ಕೊಟ್ಟರೆ ಇನ್ನೆರಡು ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿನಲ್ಲಿ ಸಿಕ್ಕಿರುವ ಡ್ರಗ್ಸ್ ಬಗ್ಗೆ ಈಗಷ್ಟೆ ಮಾಹಿತಿ ಪಡೆದಿದ್ದೇನೆ. ನಾವು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಡ್ರಗ್ಸ್ ಮುಕ್ತ ನಗರ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಒಟ್ಟಾರೆ ಡ್ರಗ್ಸ್ ಮುಕ್ತವಾಗಿರಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡಲು ಶಾಸಕರಿಗೆ ಟಿಕೆಟ್ ನೀಡಿರುವ ಕುರಿತು ಮಾತನಾಡಿದ ಅವರು, ಹಿಂದಿನಿಂದಲೂ ಶಾಸಕರಿಗೆ ಟಿಕೆಟ್ ಕೊಡುವ ವ್ಯವಸ್ಥೆ ಇದೆ. ಮೊದಲೆಲ್ಲಾ ಒಂದು ಟಿಕೆಟ್ ಕೊಡುತ್ತಿದ್ದರು. ಈಗ ಎರಡು ಟಿಕೆಟ್ ಕೊಡುವಂತೆ ಶಾಸಕರು ಕೇಳಿದರು, ಅದಕ್ಕೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದು ನಡೆಯುವ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡಲು ನಾನು ಹೋಗುವುದಿಲ್ಲ, ಎಪ್ರಿಲ್ 9 ನೇ ತಾರೀಖಿನವರೆಗೂ ಹೋಗಲ್ಲ, ಕೆಲಸ ಇದ್ದರೆ ಮ್ಯಾಚ್ ನೋಡಲ್ಲ, ಏನೂ ಕೆಲಸ ಇಲ್ಲ ಎಂದರೆ ಕ್ರಿಕೆಟ್ ಮ್ಯಾಚ್ ನೋಡುತ್ತೇನೆ ಎಂದು ಹೇಳಿದರು.






