Mysuru | ಎರಡನೇ ದಿನವೂ ಮುಂದುವರೆದ ದಸರಾ ಗಜಪಡೆಗಳ ಬಾರ ಹೊರುವ ತಾಲೀಮು

ಮೈಸೂರು: ನಾಡಹಬ್ಬ ದಸರಾದ ಮುಖ್ಯ ಆಕರ್ಷಣೆಯಲ್ಲೊಂದಾದ ಜಂಬೂಸವಾರಿಗೆ ಗಜಪಡೆಯನ್ನು ಸನ್ನದ್ದುಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಸಂಪ್ರದಾಯದಂತೆ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾರ ಹೊರುವ ತಾಲೀಮನ್ನು ಆರಂಭಿಸಲಾಗಿದ್ದು ಎರಡನೇ ದಿನವಾದ ಸೋಮವಾರವೂ ಮುಂದುವರೆದಿದೆ.
ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಬಳಿ ರವಿವಾರ ಸಂಜೆ 4ಕ್ಕೆ ಎಲ್ಲಾ ಆನೆಗಳಿಗೂ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಗಾದಿ ಮತ್ತು ನಮ್ದಾ ಹಾಗೂ ಮರಳಿನ ಮೂಟೆ ಇಡುವ ತೊಟ್ಟಿಲಿಗೂ ಪೂಜೆ ಸಲ್ಲಿಸಲಾಯಿತು. ನಂತರ ಬಳ್ಳೆ ಸಾಕಾನೆ ಶಿಬಿರದ ಮಹೇಂದ್ರ ಆನೆಗೆ ಗಾದಿ ಮತ್ತು ನಮ್ದಾವನ್ನು ಬಿಗಿದು ಬಳಿಕ ಅದರ ಮೇಲೆ ತೊಟ್ಟಿಲನ್ನು ಕಟ್ಟಲಾಯಿತು. ನಂತರ 50 ಕೆ.ಜಿ. ತೂಕದ 9 ಮರಳಿನ ಮೂಟೆಗಳನ್ನು ಇರಿಸಲಾಯಿತು. ಈ ಮೂಲಕ ಬಾರ ಹೊರುವ ತಾಲೀಮಿಗೆ ಚಾಲನೆ ನೀಡಲಾಯಿತು.
ಎರಡನೇ ದಿನವೂ 450 ಕೆ.ಜಿ ತೂಕದ ಭಾರ:
ಮಹೇಂದ್ರ ಆನೆಗೆ ಗಾದಿ, ನಮ್ದ, ಕಬ್ಬಿಣದ ತೊಟ್ಟಿಲು ಹಾಗೂ ಮರಳಿನ ಮೂಟೆ ಸೇರಿ ಸುಮಾರು 450 ಕೆ.ಜಿ ಭಾರವನ್ನು ಹೊರಿಸಿ ತಾಲೀಮು ಆರಂಭಿಸಲಾಯಿತು. ಈ ವೇಳೆ ಆನೆಯ ಪಕ್ಕ ಕುಮ್ಕಿ ಆನೆಯಾಗಿ ಲಕ್ಷ್ಮೀ ಮತ್ತು ಕಾವೇರಿ ಸಾಥ್ ನೀಡಿದವು.
ಸಂಜೆ 5.30ಕ್ಕೆ ಅರಮನೆಯಿಂದ ಬಲರಾಮ ದ್ವಾರದ ಮೂಲಕ ಹೊರಟು ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಹಳೆಯ ಆರ್.ಎಂ.ಸಿ ವೃತ್ತ, ಹೈವೇ ವೃತ್ತ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಪುನಃ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಗಜಪಡೆ ಬಂದಿತು. ಈ ಮೂಲಕ ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ನಡೆಯಿತು. ಮಹೇಂದ್ರ ಆನೆ ಯಾವುದೇ ಅಳುಕಿಲ್ಲದೇ ಲಕ್ಷ್ಮೀ ಮತ್ತು ಕಾವೇರಿ ಆನೆಗಳೊಂದಿಗೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಮುಂದೆ ಸಾಗಿದರೆ ಏಕಲವ್ಯ, ಗೋಪಿ, ಪ್ರಶಾಂತ, ಶ್ರೀರಾಮ ಮತ್ತು ಧನಂಜಯ ಆನೆ ಸಾಗಿದವು.
08 ಆನೆಗಳಷ್ಟೇ ಭಾಗಿ: ದಸರಾ ಗಜಪಯಣ ಮೂಲಕ ಮೊದಲ ತಂಡದಲ್ಲಿ 9 ಆನೆಗಳನ್ನು ಕರೆತಂದಿದ್ದು, ಇದರಲ್ಲಿ ಶ್ರೀಕಂಠ ಆನೆಯನ್ನು ತಾಲೀಮಿನಿಂದ ಹೊರಗಿಟ್ಟು, ಉಳಿದ ಎಲ್ಲಾ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಡಿಸಿಎಫ್ ಐ.ಬಿ. ಪ್ರಭುಗೌಡ, ಮುಂದಿನ ದಿನಗಳಲ್ಲಿ ಧನಂಜಯ, ಪ್ರಶಾಂತ, ಏಕಲವ್ಯ ಆನೆಗಳಿಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುವುದು. ಶೀಘ್ರದಲ್ಲೇ 2ನೇ ತಂಡದ ಆನೆಗಳನ್ನು ಕರೆತರಲಾಗುತ್ತದೆ.
ಕಿಕ್ಕಿರಿದ ಜನ ಸಮೂಹ: ಗಜಪಡೆಯ ತಾಲೀಮು ವೀಕ್ಷಿಸಲು ರಾಜಮಾರ್ಗದುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ ಹಿನ್ನೆಲೆ ವಾಹನ ಸಂಚಾರಕ್ಕೆ ತೊಡಕಾಯಿತು. ಮೈಸೂರು ನಗರವಷ್ಟೇ ಅಲ್ಲದೇ ನಗರದ ಹೊರ ಭಾಗಗಳಿಂದ ಜನರು ಹೆಚ್ಚು ಆಗಮಿಸಿದ ಹಿನ್ನೆಲೆ ಕಿಕ್ಕಿರಿದ ಜನಸಂದಣಿ ಕಂಡುಬಂದಿತು. ಆನೆಗಳನ್ನು ನೋಡಿ ಅವುಗಳ ಫೋಟೋ ಮತ್ತು ವೀಡಿಯೋ ತೆಗೆಯಲು ಜನರು ಮುಗಿಬಿದ್ದರು.
ಈ ಸಂದರ್ಭ ಆರ್ ಎಫ್ಒ ಯಾಷ್ಮಾ ಪೊನ್ನಣ್ಣ, ಪಶುವೈದ್ಯ ಆದರ್ಶ ಇದ್ದರು.






