ನಾನು ದಲಿತ ವಿರೋಧಿಯಲ್ಲ, ಅಧಿವೇಶನದಲ್ಲಿನ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ : ಜಿ.ಟಿ.ದೇವೇಗೌಡ

ಮೈಸೂರು, ಆ.26 : ನಾನು ಎಂದೂ ಮೀಸಲಾತಿ, ದಲಿತರ ವಿರೋಧಿಯಲ್ಲ. ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಸಂಘದ ಬಿಲ್ ಮಂಡನೆ ವೇಳೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ದಲಿತರು ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ಹೇಳಿಕೆಯಿಂದ ದಲಿತ ಸಮುದಾಯದವರ ಮನಸ್ಸಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಜವಹಾರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಹೇಳಿದ್ದಾರೆ. ಇಂದು ಹಲವಾರು ಸಹಕಾರ ಸಂಘಗಳು ಮುಚ್ಚಿಹೋಗಿವೆ. ಕೆಲವು ಸಂಘಗಳಲ್ಲಿ ವೇತನ ನೀಡಲು ಆಗುತ್ತಿಲ್ಲ. ಹಾಗಾಗಿ ಸರಕಾರದ ಪಾಲುಗಾರಿಕೆ ಇರುವ ಸಹಕಾರ ಸಂಘಗಳಿಗೆ ಮಾತ್ರ ಮೀಸಲಾತಿ ಅನ್ವಯ ಮಾಡಿ ಎಂಬ ಉದ್ದೇಶದಿಂದ ನಾನು ಹೇಳಿದ್ದೇನೆಯೇ ಹೊರತು ಬೇರೆ ಉದ್ದೇಶದಿಂದ ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ನೀಡಿದರೆ ಸ್ವಾಗತ ಮಾಡುತ್ತೇನೆ. ಎಸ್ಸಿ, ಎಸ್ಟಿ ಗಳಿಗೆ ಮೂರು ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವ ಜೊತಗೆ ಹಿಂದುಳಿದವರಿಗೂ ಮೀಸಲಾತಿ ನೀಡಿ ನಾಲ್ಕು ನಿರ್ದೇಶನ ಮಾಡಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಅಧಿವೇಶನದಲ್ಲಿ ನಾನು ಮೀಸಲಾತಿ ವಿರೋಧಿಸಿ ಮಾತನಾಡಲಿಲ್ಲ. ಸಹಕಾರ ಸಂಘದಲ್ಲಿನ ಬದಲಾವಣೆ ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲು ಲಕ್ಷ್ಮಣ್ ಸವಧಿ ಅವರು ಸಹಕಾರ ಸಚಿವರಾಗಿದ್ದ ವೇಳೆ ನಾಲ್ಕು ಜನರ ಕಮಿಟಿ ರಚಿಸಲಾಗಿದೆ. ಆ ಕಮಿಟಿ ವರದಿ ಪಡೆಯದೇ ಬಿಲ್ ಮಂಡನೆ ಮಾಡಿದ್ದರಿಂದ ನಾನು ಮಾತನಾಡಿದ್ದೇನೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನಾನು ಸಂವಿಧಾನ ವಿರೋಧಿಯಲ್ಲ, ನನ್ನ ಹೇಳಿಕೆ ಖಂಡಿಸಿ ಹಲವಾರು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನನ್ನ ವಿರುದ್ಧ ಅಸಂವಿಧಾನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದಿದೆ. ಅವರು ದೂರು ಕೊಟ್ಟರೂ ನಾನು ಅವರ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು.
ನಾನು ದಲಿತರ ಒಡನಾಟದಲ್ಲೇ ಬೆಳೆದವನು, ನಮ್ಮ ಊರಿನ ಪಕ್ಕದ ಹಳ್ಳಿಯಲ್ಲಿ ದಲಿತರಿಗೆ ಭೂಮಿ ಕೊಡಿಸಲು ನಾನು ಮತ್ತು ತಂದೆ ಹೋರಾಟ ಮಾಡಿದ್ದೇವೆ. ದಲಿತರ ಜಗಲಿಯಲ್ಲಿ ಮಲಗಿ ಬೆಳೆದಿದ್ದೇನೆ. ನಾನು ದಲಿತರ ವಿರೋಧಿಯಲ್ಲ, ಯಾವ ಸಮುದಾಯದ ವಿರೋಧಿಯೂ ಅಲ್ಲ ಎಂದು ಹೇಳಿದರು.
ನ್ಯಾ.ನಾಗಮೋಹನ್ ದಾಸ್ ಅವರು ಸಂವಿಧಾನ ಓದು ಪುಸ್ತಕವನ್ನು ಬೆಂಗಳೂರಿನಲ್ಲಿ ನನ್ನ ನೇತೃತ್ವದಲ್ಲಿ ಮಾಡಿಸಿದ್ದಾರೆ. ಕಡಕೋಳ ನಾಗರಾಜ್ ಎಂಬ ದಲಿತ ಹುಡುಗನನ್ನು ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಮೈಸೂರು ನಗರದ ಸೌಹಾರ್ಧ ಸಹಕಾರ ಮಹಾಮಂಡಲದ ಅಧ್ಯಕ್ಷರನ್ನಾಗಿ ಬನ್ನೂರಿನ ನಂಜುಂಡಸ್ವಾಮಿ ಅವರನ್ನು ಮಾಡಿದ್ದೇನೆ. ನಾನು ಎಂದೂ ದಲಿತ ವಿರೋಧಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಬೆಳವಾಡಿ ಶಿವಕುಮಾರ್ ಸ್ವಾಮಿ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.







