ಮೈಸೂರು | ಬಾಂಬ್ ಬೆದರಿಕೆ ಕರೆ: ಪ್ರಮುಖ ಸ್ಥಳಗಳಲ್ಲಿ ಶ್ವಾನದಳ, ಪೊಲೀಸರಿಂದ ಪರಿಶೀಲನೆ

ಮೈಸೂರು : ನಗರದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಶೋಧ ನಡೆಸಲು ಶ್ವಾನದಳ, ವಿಶೇಷ ದಳ ಮತ್ತು ಬಾಂಬ್ ನಿಷ್ಕೀಯ ದಳಗಳನ್ನು ನಿಯೋಜಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಅವರ ಅಧಿಕೃತ ಐಡಿಗೆ ಬೆಳಗಿನ ಜಾವ 1.30ರ ಸುಮಾರಿಗೆ ಕಳುಹಿಸಲಾದ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಮೈಸೂರಿನ ವಿವಿಧ ಸ್ಥಳಗಳಲ್ಲಿ ಹಲವಾರು ಬಾಂಬ್ಗಳನ್ನು ಇರಿಸಲಾಗಿದ್ದು, 24ಗಂಟೆಗಳ ಒಳಗೆ ಅವು ಸ್ಫೋಟಗೊಳ್ಳುತ್ತವೆ ಎಂದು ಸಂದೇಶದಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ತ್ವರಿತವಾಗಿ ಕಾರ್ಯನಿರ್ವಹಿಸಿದ ಆಯುಕ್ತೆ ಸೀಮಾ ಲಾಟ್ಕರ್, ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಬೆದರಿಕೆಯನ್ನು ಪರಿಶೀಲಿಸಲು ಮತ್ತು ತಟಸ್ಥಗೊಳಿಸಲು ತಂಡಗಳನ್ನು ತಕ್ಷಣವೇ ನಿಯೋಜಿಸಲು ಸೂಚನೆ ನೀಡಿದರು. ನಗರದ ಭದ್ರತಾ ವ್ಯವಸ್ಥೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.
ನಗರ ರೈಲ್ವೆ ನಿಲ್ದಾಣ, ಮೈಸೂರು ವಿಮಾನ ನಿಲ್ದಾಣ, ನಗರ ಮತ್ತು ಸಬ್-ಅರ್ಬನ್ ಬಸ್ ನಿಲ್ದಾಣಗಳು, ಮೈಸೂರು ಅರಮನೆ, ಪ್ರಮುಖ ದೇವಾಲಯಗಳು, ಹೋಟೆಲ್ಗಳು ಮತ್ತು ಹೆಚ್ಚಿನ ಜನದಟ್ಟಣೆ ಇರುವ ಇತರ ಪ್ರದೇಶಗಳು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳನ್ನು ಕಳುಹಿಸಲಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಾಂಬ್ ಪತ್ತೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಮಗೆ ಬೆಳಗಿನ ಜಾವ 1.30 ಕ್ಕೆ ಬೆದರಿಕೆ ಮೇಲ್ ಬಂದಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸಾರ್ವಜನಿಕ ಸ್ಥಳ, ಹೋಟೆಲ್ ಮತ್ತು ಲಾಡ್ಜ್ಗಳು ಸೇರಿ ಇಡೀ ನಗರವನ್ನು ಪರಿಶೀಲಿಸುತ್ತಿದ್ದಾರೆ. ನಾವು ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಅಂತಹ ಎಚ್ಚರಿಕೆಗಳು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿರುವುದರಿಂದ ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ನಗರವು ಕಟ್ಟೆಚ್ಚರದಲ್ಲಿದೆ.
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ.