ಮೈಸೂರು | ಪರಿಹಾರದ ಆಸೆಗೆ ಪತಿಯನ್ನು ಹತ್ಯೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿ ಬಿದ್ದ ಪತ್ನಿ!

ಸಾಂದರ್ಭಿಕ ಚಿತ್ರ | PC : freepik
ಮೈಸೂರು, ಸೆ.12 : ಪರಿಹಾರದ ಆಸೆಗಾಗಿ ಪತ್ನಿಯು ಪತಿಯನ್ನೇ ಕೊಂದು ನಂತರ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಈಗ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕ ಹೆಜ್ಜೂರು ಗ್ರಾಮದ ನಿವಾಸಿ ವೆಂಕಟಸ್ವಾಮಿ (45) ಹತ್ಯೆಯಾದವರು ಎಂದು ಗುರುತಿಸಲಾಗಿದೆ. ಪತ್ನಿ ಸಲ್ಲಾಪುರಿ ಎಂಬಾಕೆಯೇ ತನ್ನ ಗಂಡ ವೆಂಕಟಸ್ವಾಮಿಯನ್ನು ಹತ್ಯೆಗೈದು ನಂತರ ಹುಲಿ ಕೊಂದಿದೆ ಎಂದು ಹೇಳಿದ್ದರು. ಇದೀಗ ಮಹಿಳೆ ಸಿಕ್ಕಿಬಿದ್ದಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ದಂಪತಿಗಳು ವಾಸವಾಗಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಸಲ್ಲಾಪುರಿ ಪೊಲೀಸರಿಗೆ ದೂರು ನೀಡಿದ್ದಳು. ಅಷ್ಟೇ ಅಲ್ಲದೆ ಪತಿಯನ್ನು ಹುಲಿ ಎಳೆದುಕೊಂಡು ಹೋಗಿರಬಹುದು ಎಂದು ಅನುಮಾನ ಕೂಡ ವ್ಯಕ್ತಪಡಿಸಿದ್ದಳು.
ಈ ಮಧ್ಯೆ ಕೆಲ ದಿನಗಳ ಹಿಂದೆ ಹೆಜ್ಜೂರು ಗ್ರಾಮದ ಬಳಿಯಲ್ಲಿ ಹುಲಿ ಓಡಾಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪತ್ನಿ ಸಲ್ಲಾಪುರಿ ಹುಲಿ ಕೊಂದಿದೆ ಎಂದು ದೂರು ನೀಡಿದ್ದಳು. ದೂರು ಸ್ವೀಕರಿಸಿದ್ದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟಸ್ವಾಮಿಗೆ ಹುಡುಕಾಡಿದ್ದಾರೆ. ಪರಿಶೀಲನೆ ವೇಳೆ ಪ್ರಾಣಿ ಹೆಜ್ಜೆ ಗುರುತು ಪ್ತತೆಯಾಗಿತ್ತು. ಆದರೇ ಹುಲಿ ಎಲ್ಲೂ ಕಂಡಿರಲಿಲ್ಲ.
ತೋಟದ ಮಾಲೀಕ ಹಾಕಿಸಿದ್ದ ಸಿಸಿ ಟಿವಿ ಪರಿಶೀಲಿಸಿದಾಗ ಪತಿ ದೇಹವನ್ನು ಪತ್ನಿ ಎಳೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಮನೆ ಹಿಂದಿನ ತಿಪ್ಪೆಗುಂಡಿಯಲ್ಲೇ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ವರಸೆಯಲ್ಲಿ ಸಲ್ಲಾಪುರಿ ವಿಚಾರಿಸಿದಾಗ, ಪರಿಹಾರದ ಆಸೆಗೆ ಪತಿಯನ್ನು ಕೊಂದು, ಈ ನಾಟಕ ಆಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮುದ್ದೆಯಲ್ಲಿ ವಿಷ ಬೆರೆಸಿ ಕೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.







