ಮೈಸೂರು ದಸರಾ | ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ; ಜನರ ಮನಸೂರೆಗೊಂಡ ವೈಮಾನಿಕ ಪ್ರದರ್ಶನ

ಮೈಸೂರು, ಸೆ.27: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ಸಂಜೆ ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಮೂಡಿತು. ಮಳೆ ಸುರಿದ ಆಕಾಶದಲ್ಲಿ ಮೂಡಿದ ಕಾಮನಬಿಲ್ಲು, ಸಾರಂಗ ತಂಡ ಮೂಡಿಸಿದ ಚಿತ್ತಾರವೂ ದಸರಾ ಸಂಭ್ರಮದಲ್ಲಿದ್ದ ಮೈಸೂರಿನ ಜನತೆಯ ಮನಗಳಿಗೆ ಬಣ್ಣ ತುಂಬಿತು.
ಕೆಂಪು ಮತ್ತು ಬಿಳಿ ಬಣ್ಣದ ಹೊಗೆಯನ್ನಾರಿಸುವುದರ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳು ವೈಮಾನಿಕ ಹಾರಾಟದ ಮೂಲಕ ತನ್ನ ಯಶಸ್ಸು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರೆ, ಇತ್ತ ಮೈಸೂರಿನ ಜನರು ಶಿಳ್ಳೆ, ಚಪ್ಪಾಳೆ ಹಾಗೂ ಜೋರಾದ ಚೀತ್ಕಾರದೊಂದಿಗೆ ಸಂಭ್ರಮಿಸಿದರು.
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ(ಐಎಎಫ್) ಸಾರಂಗ ತಂಡದಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ನವಿಲಿನ ಚಿತ್ತಾರವಿರುವ ಲೋಹದ ಹಕ್ಕಿಗಳ ಚಮತ್ಕಾರಿ ಪ್ರದರ್ಶನಕ್ಕೆ ನೆರದಿದ್ದವರು ಮಾರು ಹೋದರು.
ಸುಮಾರು 22 ರಿಂದ 25 ನಿಮಿಷಗಳ ಕಾಲ ಶರವೇಗದಲ್ಲಿ ನಡೆದಂತಹ ವೈಮಾನಿಕ ಹಾರಾಟದಲ್ಲಿ ಡಾಲ್ಫೀನ್ ಸ್ಲೀಪ್, ಸಾರಂಗ್ ಸ್ಪ್ಲೀಟ್, ಹಾರ್ಟ್ ಫಾರ್ಮೇಷನ್, ಡಿವೈನ್ ಗ್ಲಾಸ್, ಡಬಲ್ ಏರೋ ಕ್ರಾಸ್ ಸೇರಿದಂತೆ ಒಟ್ಟು 16 ರೀತಿಯ ಮಾದರಿಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.
ಇದಕ್ಕಾಗಿ ಒಟ್ಟು 70 ಸಿಬ್ಬಂದಿ ಶ್ರಮಿಸಿದ್ದು, ಐದು ಸಾರಂಗಗಳು ಅತ್ಯದ್ಭುತವಾದ ಪ್ರದರ್ಶನ ನೀಡುವ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿಯ ಮನಸ್ಸನ್ನು ಸೂರೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮತ್ತಿತರರು ಉಪಸ್ಥಿತರಿದ್ದರು.
ಅತೀವ ನಿರೀಕ್ಷೆ ಮೂಡಿಸಿದ್ದ ಹೆಲಿಕಾಪ್ಟರ್ ಪ್ರದರ್ಶನವೂ 20 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಜನರಲ್ಲಿ ನಿರಾಸೆ ಮೂಡಿಸಿತು. ವೈಮಾನಿಕ ಪ್ರದರ್ಶನ ವೀಕ್ಷಿಸಬೇಕೆಂದು ಪಾಸ್ ಪಡೆದು, ಮೈಸೂರಿನ ಸಂಚಾರ ದಟ್ಟಣೆಯನ್ನು ಸಹಿಸಿಕೊಂಡು ಬನ್ನಿಮಂಟಪದ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಒಳ ಬರಲಾಗದೇ ಸಾವಿರಾರು ಜನರು ಹೊರಗೆ ಇದ್ದರು. 20 ನಿಮಿಷದಲ್ಲಿ ಪ್ರದರ್ಶನ ಮುಗಿದಿದ್ದರಿಂದ ನಿರಾಸೆಯಿಂದ ಅವರು ಮರಳಿದರು.
ದಸರಾ ವೇಳೆ ಮೈಸೂರಲ್ಲಿ ವೈಮಾನಿಕ ಪ್ರದರ್ಶನ ನಡೆಸುವುದು ಅದ್ಭುತವಾದ ಅನುಭವ. ಮೈಸೂರಿನ ವಾತಾವರಣ, ಜನ ಸಮೂಹದ ಎದುರು ಪ್ರದರ್ಶನ ನೀಡುವುದು ರೋಮಾಂಚನಕಾರಿ. ಎಲ್ಲ ವೈಮಾನಿಕ ಪ್ರದರ್ಶನಗಳಲ್ಲೂ ಸವಾಲುಗಳಿರುತ್ತವೆ. ಆದರೂ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ರೋಮಾಂಚನಕಾರಿ ಪ್ರದರ್ಶನವೂ ಮೈಸೂರಿನ ಜನತೆಯನ್ನು ರಂಜಿಸಿದೆ.
-ಪಲ್ಲವಿ, ಸಾರಂಗ ತಂಡದ ಸದಸ್ಯೆ







