ಮೈಸೂರು ದಸರಾ | ವಿಶ್ವವಿಖ್ಯಾತ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಮೈಸೂರು ,ಅ. 2 : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂ ಸವಾರಿ ಮೆರವಣಿಗೆಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿ ಚಾಲನೆ ನೀಡಿದರು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯನ್ನು ಹೊತ್ತು ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಜೆ 4.42 ರ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ವೈಭವದ ಜಂಬೂ ಸವಾರಿಗೆ ಗೌರವ ಸಲ್ಲಿಸಿದರು.
ಮಧ್ಯಾಹ್ನದ ನಂತರ ಸುರಿದ ತುಂತುರು ಮಳೆಯಲ್ಲಿ 415ನೇ ವಿಜಯದಶಮಿ ಮೆರವಣಿಗೆ ಅದ್ಧೂರಿಯಾಗಿ ಸಾಗಿತು. ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಕಲಾತಂಡಗಳು, ಸರಕಾರದ ಸಾಧನೆಯ ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಅತ್ಯಾಕರ್ಷಕವಾಗಿದ್ದವು. ಲಕ್ಷಾಂತರ ಜನರು ದಸರಾವನ್ನು ಕಣ್ತುಂಬಿಕೊಂಡರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಪುಷ್ಪಾರ್ಚನೆ ಮಾಡಿದರು.
ಬಳಿಕ ರಾಜಬೀದಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಕುಮ್ಕಿ ಆನೆಗಳಾದ ಕಾವೇರಿ, ರೂಪ ಜೊತೆ ಹೆಜ್ಜೆ ಹಾಕಿತು. ಆಶ್ವರೋಹಿ ಪಡೆ, ನಾದಸ್ವರ, ಕಮಾಂಡೊ ಪಡೆಯ ಬಿಗಿಭದ್ರತೆಯಲ್ಲಿ ಸಾಗಿತು.
ನಿಶಾನೆ ಆನೆ ಗೋಪಿ ನೇತೃತ್ವದ ಮಹೇಂದ್ರ, ಲಕ್ಷ್ಮಿ, ಗಜೇಂದ್ರ, ಪ್ರಶಾಂತ, ಸುಗ್ರೀವ, ಭೀಮ, ಕಂಜನ್, ಏಕಲವ್ಯ ಆನೆಗಳು ಹೆಜ್ಜೆ ಹಾಕಿದವು.
ಇದಕ್ಕೂ ಮೊದಲು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಐರಾವತ ಬಸ್ಸಿನಲ್ಲಿ ಅರಮನೆಗೆ ಆಗಮಿಸಿದ ಮುಖ್ಯಮಂತ್ರಿಗಳು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಂದಿ ಧ್ವಜ ಪೂಜೆ ಮಾಡಿದರು. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ಗಾಂಧೀಜಿ ಬಿಂಬಿಸುವ ಹೆಚ್ಚು ಸ್ಥಬ್ದಚಿತ್ರಗಳು:
ಗಾಂಧಿ ಜಯಂತಿ ದಿನದಂದೇ ವಿಜಯದಶಮಿ ಜಂಬೂ ಸವಾರಿ ನಡೆಯುತ್ತಿರುವುದು ವಿಶೇಷವಾಗಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಮಹಾತ್ಮ ಗಾಂಧೀಜಿ ಕುರಿತ ಅವರ ಕಾರ್ಯಚಟುವಟಿಕೆಗಳನ್ನು ಬಿಂಬಿಸುವ ಹೆಚ್ಚು ಸ್ಥಬ್ಧ ಚಿತ್ರಗಳು ಮೆರವಣಿಗೆಗೆ ರಂಗು ತಂದವು.
ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ರಾಷ್ಟ್ರಧ್ವಜ ತಯಾರಿಕ ಕೇಂದ್ರ ಗರಗ ಕಲಘಟಗಿ, ನವಲಗುಂದ, ಬದನವಾಳು ನೂಲುವ ಪ್ರಾಂತ್ಯ, ಸಮಾಜ ಕಲ್ಯಾಣ ಇಲಾಖೆಯ ಜ್ಞಾನವೇ ದಿವ್ಯ ಜ್ಯೋತಿ, ಸ್ತಬ್ಧ ಚಿತ್ರಗಳು ಮಹಾತ್ಮ ಗಾಂಧೀಜಿ ಅವರನ್ನು ಬಿಂಬಿಸಿದವು. ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ, ಗ್ಯಾರಂಟಿ ಯೋಜನೆಯ ಪ್ರತಿಬಿಂಬಿಸುವ ಶಕ್ತಿ ಯೋಜನೆ, ಅನ್ನ ಭಾಗ್ಯ ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 58 ಸ್ತಬ್ಧ ಚಿತ್ರಗಳು, ನೂರಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ತುಂತುರು ಮಳೆ ಸುರಿದರೂ ಕಲಾವಿದರ ಉತ್ಸಾಹಕ್ಕೆ ಅಡಚಣೆಯಾಗಲಿಲ್ಲ. ಸುರಿಯವ ಮಳೆಯಲ್ಲಿಯೇ ಜನರು ಕದಲದೆ ಜಂಬೂ ಸವಾರಿ ವೀಕ್ಷಿಸಿದರು.
750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 6ನೇ ಬಾರಿಗೆ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯವಾಗಿ ಹೆಜ್ಜೆಹಾಕಿದ್ದಾನೆ. ಒಟ್ಟು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಿದವು.
ಅರಮನೆಯಿಂದ ಆರಂಭಗೊಂಡಿದ್ದ ಜಂಬೂಸವಾರಿ ಅರಮನೆ, ಜಯಚಾಮರಾಜ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಆರ್.ಎಂ.ಸಿ ವೃತ್ತ, ಬಂಬೂಬಜಾರ್ ಮೂಲಕ ಬನ್ನಿಮಂಟಪ ತಲುಪಿತು.
ರಸ್ತೆಯ ಇಕ್ಕೆಲಗಳಲ್ಲಿ ಜಂಬೂ ಸವಾರಿ ವೀಕ್ಷಿಸಿದ ಜನರು:
ಜಂಬೂ ಸವಾರಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರುವ ತುಂಬಿದ್ದ ಸಾವಿರಾರು ಮಂದಿ ಶ್ರೀಮಂತಗೊಳಿಸುವ ಸಾಂಸ್ಕೃತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳ ಜೊತೆಗೆ ಕ್ಯಾಪ್ಟನ್ ಅಭಿಮನ್ಯು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಸಾಗಿದ ಶ್ರೀ ಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಂಡರು.
ರಸ್ತೆಯ ಬದಿಯಲ್ಲೇ ಬೆಳಿಗ್ಗೆಯೇ ಬಂದು ಸ್ಥಳ ಹಿಡಿದಿದ್ದ ಜನರು ಸಂಜೆವರೆಗೂ ಕಾದು ದಸರಾ ವೀಕ್ಷಿಸಿ ಸಂತಸಪಟ್ಟರು.
ನಾಡಹಬ್ಬ ದಸರಾ ಜನರ ಹಬ್ಬ. ಜನರು ಖುಷಿಯಾದರೆ ಸರಕಾರವೂ ಖುಷಿಯಾಗುತ್ತದೆ. ಜನರ ಆಶೀರ್ವಾದದಿಂದ 8ನೇ ಬಾರಿ ಜಂಬೂಸವಾರಿಗೆ ಚಾಲನೆ ನೀಡಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.
8ನೇ ಬಾರಿಗೆ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಿ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ 8ನೇ ಬಾರಿ ಚಾಲನೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ 2013 ರಿಂದ 2018 ರ ಐದು ವರ್ಷಗಳ ಆಡಳಿತಾವಧಿಯಲ್ಲಿ 5 ಬಾರಿ ವಿಜಯ ದಶಮಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದ್ದರು.
ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ 2023 ರಿಂದ 2025 ರ ಅವಧಿಯಲ್ಲಿ 3 ಬಾರಿ ಜಂಬೂ ಸವಾರಿಗೆ ಚಾಲನೆ ನೀಡಿ ಒಟ್ಟು 8 ಬಾರಿ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಯನ್ನು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.







