Mysuru | ರಾಹುಲ್ ಗಾಂಧಿ ಮೇಲಿನ FIRಗೆ ಖಂಡನೆ : ಆರೆಸ್ಸೆಸ್, ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮೈಸೂರು : ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಎಫ್.ಐ.ಆರ್ ಹಾಕಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಆರೆಸ್ಸೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರು ತಡೆದು ವಶಕ್ಕೆ ಪಡೆದರು.
ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಮಾದವ ಕೃಪಾಗೆ ಮಂಗಳವಾರ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಮುಖಂಡ ಹೊಯ್ಸಳ ನೇತೃತ್ವದಲ್ಲಿ ಕಾರ್ಯಕರ್ತರು ಆಗಮಿಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಅರ್ಧದಲ್ಲೇ ತಡೆದರು. ಇದರಿಂದ ಕೆರಳಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʼಆರೆಸ್ಸೆಸ್ ಷಡ್ಯಂತ್ರದಿಂದ ರಾಹುಲ್ ಗಾಂಧಿ ಅವರ ಮೇಲೆ ಎಫ್.ಐ.ಆರ್ ಹಾಕಲಾಗಿದೆ. ಇದು ಅತ್ಯಂತ ಖಂಡನೀಯ, ಹಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ದೀಕರಣ ಮಾಡಿರುವುದನ್ನು ಖಂಡಿಸಿರುವುದು ಅಪರಾಧ ಎಂದಾದರೆ, ಬಿಜೆಪಿ ನಾಯಕರುಗಳು ದಿನ ನಿತ್ಯ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಮೇಲೆ ಏಕೆ ಎಫ್.ಐ.ಆರ್ ಹಾಕುವುದಿಲ್ಲʼ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರ ಜನಪ್ರಿಯತೆ ಸಹಿಸದ ಆರೆಸ್ಸೆಸ್ ಮತ್ತು ಬಿಜೆಪಿ ಅವರ ಮೇಲೆ ನಿರಂತರ ಷಡ್ಯಂತ್ರ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್ಸಿಗರು ಬಗ್ಗುವುದಿಲ್ಲ ಎಂದು ಹೇಳಿದರು.
ಈ ಕೂಡಲೇ ರಾಹುಲ್ ಗಾಂಧಿ ಅವರ ಮೇಲೆ ಹಾಕಿರುವ ಎಫ್.ಐ.ಆರ್ ಅನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಯುವ ಕಾಂಗ್ರೆಸ್ ನಿರಂತರವಾಗಿ ದೇಶಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ವರಿಸಿದರು.
ಇದಕ್ಕೂ ಮೊದಲು ಯುವ ಕಾಂಗ್ರೆಸ್ ಮುಖಂಡ ವಿನೊದ್ ನೇತೃತ್ವದಲ್ಲಿ ಮತ್ತೊಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿತು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.






