ಜಗತ್ತಿನಲ್ಲಿ ಹಿಂದೆಂದೂ ಕಾಣದಷ್ಟು ಹಿಂಸೆ ತಾಂಡವವಾಡುತ್ತಿವೆ : ಆಶಾದೇವಿ
ರಾಜ್ಯ ಮಟ್ಟದ ಕವಿಗೋಷ್ಠಿ, ಕವನ ಸಂಕಲನ ಬಿಡುಗಡೆ

ಮೈಸೂರು : ಇಡೀ ನಾಗರಿಕತೆಗೆ ತಾತ್ವಿಕತೆಯ ಅರಾಜಕತೆ ಬಂದಿದೆ. ಜಗತ್ತಿನಲ್ಲಿ ಹಿಂದೆಂದೂ ಕಾಣದಷ್ಟು ಹಿಂಸೆ ತಾಂಡವವಾಡುತ್ತಿವೆ ಎಂದು ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಲಗತ್ತಿ ದಶಬಲ ಟ್ರಸ್ಟ್ ರೈಟ್ಸ್ ಅಕಾಡಮಿ ವತಿಯಿಂದ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕಾವ್ಯ ಢಮರುಗ 2025’ ರಾಜ್ಯ ಮಟ್ಟದ ಕವಿಗೋಷ್ಠಿ, ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅರವಿಂದ ಮಾಲಗತ್ತಿ ಅವರ ‘ಯವ್ವ ತಾಯವ್ವ ಮಾತೆಯ ಮಹಾಗೀತೆ ಖಂಡ’ ಕಾವ್ಯ ಕೃತಿ ಕುರಿತು ಮಾತನಾಡಿದರು.
ಈ ಹೊತ್ತು ಸಾಹಿತ್ಯ ಸೇರಿ ಎಲ್ಲ ಕಲಾ ಪ್ರಕಾರಗಳು ಸಮುದಾಯದಲ್ಲಿ ನಿರ್ವಹಿಸಬೇಕಾದ ಪಾತ್ರ ಯಾವುದು? ಆ ಪಾತ್ರವನ್ನು ನಿರ್ವಹಿಸುತ್ತಿವೆಯೇ? ಎಂದು ಅನಿಸುತ್ತದೆ. ಆದರೆ, ಕಲೆಯ ಕಡೆಗೆ ನೋಡಬೇಕಾದ ಅನಿವಾರ್ಯತೆ ಎದುರಿಗಿದೆ. ಕಲೆಗಳನ್ನು ವೈದ್ಯರ ಪಾತ್ರದಲ್ಲಿ ಕಾಣಬೇಕಿದೆ. ಅನೇಕ ಬಗೆಯ ಬಿಕ್ಕಟ್ಟು ಹಾಗೂ ಮನಸ್ಥಿತಿ ಶುದ್ಧ ಮಾಡುವ ಮಾಂತ್ರಿಕ ಶಕ್ತಿ ಕಲೆಗಳಿಗಿದೆ ಎಂದು ಅವರು ನುಡಿದರು.
ಅರವಿಂದ ಮಾಲಗತ್ತಿ ಅವರ ಕಾವ್ಯ ಈ ಹೊತ್ತಿನ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ತಾಯಿ ವಿಶ್ವಪ್ರಜ್ಞೆಯಾಗಿ ಭಾವಪೂರ್ಣ ನಿರೂಪಣೆ ಇದೆ. ಸ್ವಾತಂತ್ರ್ಯೋತ್ತರ ಭಾರತದ ಹೆಣ್ಣು ಮಕ್ಕಳ ಝಲಕ್ ಇದೆ. ತಾಯ್ತನ ಅನ್ನೋದು ಅಮರ ಎಂದು ಮಾಲಗತ್ತಿ ಅವರ ಕೃತಿಯ ಬಗ್ಗೆ ವಿಶ್ಲೇಷಿಸಿದರು.
ಕವಯತ್ರಿ ಡಾ.ಧರಣಿದೇವಿ ಮಾಲಗತ್ತಿ ಢಮರುಗ ನುಡಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿವ ಢಮರುಗ ನುಡಿಸಿದಾಗ ದನಿ ಉತ್ಪತ್ತಿಯಾಯಿತು. ದನಿಯಿಂದ ಭಾಷೆ ಸೃಷ್ಟಿಯಾಯಿತು. ಅದನ್ನು ಪಾಣಿನಿ 14 ಶಿವ ಸ್ತೋತ್ರಗಳಾಗಿ ಸೃಷ್ಟಿಸಿದೆ. ಭಾಷೆ ಉತ್ಪತ್ತಿಯ ಪ್ರತಿಮೆಯಾಗಿ ನಾವಿದನ್ನು ಬಳಸುತ್ತಿದ್ದೇವೆ. ಭಾಷೆ ಕೇಳುಗರ ಮತ್ತು ಅನುಕರಣೆಯಿಂದ ಬೆಳೆಯಿತು. ಲಿಖಿತ ಪರಂಪರೆ ನಂತರ ಬಂದದ್ದು. ಕಾವ್ಯ ಹೇಗಿರಬೇಕು? ಒಳ್ಳೆಯ ಭಾಷೆ, ಒಂದು ಪದ ಹೆಚ್ಚಾಗದಂತೆ ಹದವಾಗಿರಬೇಕು. ಪ್ರಾಸ, ಛಂದಸ್ಸು, ಲಯ ಮುಖ್ಯ. ಇವುಗಳನ್ನು ಹೊರತುಪಡಿಸಿ ಕಾವ್ಯ ಸೃಷ್ಟಿಯಾಗಿವೆ ಎಂದರು.
ದಶಬಲ ಟ್ರಸ್ಟ್ ಉಪಾಧ್ಯಕ್ಷ ಡಾ.ಡಿ.ಕೆ.ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾವ್ಯ ಢಮರುಗ ಕೃತಿಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಎನ್.ಕೆ. ಲೋಲಾಕ್ಷಿ ಬಿಡುಗಡೆ ಮಾಡಿದರು. ನೀ.ಗೂ ರಮೇಶ್ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.