ಟಿ.ನರಸೀಪುರ ಪ್ರತಿಭಟನೆ ವೇಳೆ ಬಿಜೆಪಿಯೊಳಗಿನ ಅಸಮಾಧಾನ ಸ್ಫೋಟ: ಪ್ರತಾಪ್ ಸಿಂಹ, ಎಲ್.ನಾಗೇಂದ್ರ ನಡುವೆ ತಳ್ಳಾಟ-ನೂಕಾಟ

ಮೈಸೂರು : ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಪ್ರತಿಭಟನೆ ವೇಳೆ ನಗರ ಬಿಜೆಪಿ ಒಳಗಿನ ಅಸಮಾಧಾನ ಸ್ಫೋಟಗೊಂಡಿದೆ.
ಪ್ರತಿಭಟನಾ ಮೆರವಣಿಗೆ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಹಾಗೂ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ನಡುವೆ ತಳ್ಳಾಟ-ನೂಕಾಟ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಎಲ್.ನಾಗೇಂದ್ರ, ಪ್ರತಾಪ್ ಸಿಂಹ ವಿರುದ್ಧ ಏರು ಧನಿಯಲ್ಲೇ ಮಾತಾಡಿದ್ದಾರೆ ಎನ್ನಲಾಗಿದೆ. ಪ್ರತಾಪ್ ಸಿಂಹ ಕೂಡ ನಾಗೇಂದ್ರ ವಿರುದ್ಧ ಕೂಗಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಪಕ್ಷ ನಾಯಕ ಆರ್.ಅಶೋಕ್ ಮುಂದೆಯೇ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಇನ್ಸ್ ಪೆಕ್ಟರ್ ವಿರುದ್ಧ ಪ್ರತಿಭಟನೆ ಮಾಡಲು ಬಂದ ಬಿಜೆಪಿ ಮುಖಂಡರಲ್ಲೇ ಅಸಮಾಧಾನ ಸ್ಫೋಟಗೊಂಡು ಇವರ ವೈಯಕ್ತಿಕ ಜಗಳವೇ ಪ್ರಮುಖವಾದಂತಾಗಿದೆ. ಘಟನೆಯಿಂದ ಎಲ್.ನಾಗೇಂದ್ರ ಸ್ಥಳದಿಂದಲೇ ವಾಪಸ್ ಮೈಸೂರಿಗೆ ತೆರಳಿದರು.
ಮೈಸೂರು ನಗರದ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್.ನಾಗೇಂದ್ರ ಮತ್ತು ಪ್ರತಾಪ್ ಸಿಂಹ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಮೇಲೆ ಪ್ರತಾಪ್ ಸಿಂಹ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದು, ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಲ್.ನಾಗೇಂದ್ರ ಒಮ್ಮೆ ಚಾಮರಾಜ ಕ್ಷೇತ್ರದ ಶಾಸಕರಾಗಿದ್ದರು. ಈ ವಿಚಾರವಾಗಿ ಈ ಹಿಂದೆಯೂ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು.
ಇದೀಗ ಟಿ.ನರಸೀಪುರದಲ್ಲಿ ಇಬ್ಬರ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ನಾಯಕರ ಪರಸ್ಪರ ಜಗಳ ಕಂಡು ಬಿಜೆಪಿ ಕಾರ್ಯಕರ್ತರೇ ಇಬ್ಬರ ನಡವಳಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿ ಪಕ್ಷದ ಮಟ್ಟದಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.






