ಠಾಣೆಗೆ ನುಗ್ಗುವುದಾಗಿ ಧಮ್ಕಿ ಹಾಕಿರುವ ಪ್ರತಾಪ್ ಸಿಂಹ ವಿರುದ್ಧ FIR ದಾಖಲಿಸಿ : ಎಂ.ಲಕ್ಷ್ಮಣ್ ಒತ್ತಾಯ

ಮೈಸೂರು : ಟಿ.ನರಸೀಪುರ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಧಮ್ಕಿ ಹಾಕಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇನ್ಸ್ಪೆಕ್ಟರ್ಗೆ ಎಚ್ಚರಿಕೆ ಕೊಟ್ಟಿರುವ ಪ್ರತಾಪ್ ಸಿಂಹ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜುರ್ನ ಬಾಲದಂಡಿ ಅವರಿಗೆ ಒತ್ತಾಯಿಸಿದ್ದೇನೆ. ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಳೆದ ವರ್ಷ ಗಣೇಶೋತ್ಸವದ ವೇಳೆ ಮಸೀದಿ ಮುಂದೆ ಕಲ್ಲು ತೂರಾಟ ಮಾಡಿ ಗೊಂದಲ ಸೃಷ್ಟಿಸಲಾಗಿತ್ತು. ಈ ಸಂಬಂಧ ಎಚ್ಚರಿಕೆ ಕೊಟ್ಟಿರುವುದನ್ನು ತಪ್ಪು ಎಂದು ಬಿಂಬಿಸುತ್ತಾ ಠಾಣೆ ಎದುರು ಪ್ರತಿಭಟನೆ ನಡೆಸುವುದು, ಅಧಿಕಾರಿಗಳಿಗೆ ಧಮ್ಕಿ ಹಾಕುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟಿ.ನರಸೀಪುರದ ಠಾಣೆಗೆ ಭೇಟಿ ನೀಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಪೌರುಷವನ್ನು ಕೇಂದ್ರದಿಂದ ಅನುದಾನ ತರಲು ಯಾಕೇ ಬಳಸಬಾರದು? ಕೋಮು ಗಲಭೆ ಸೃಷ್ಟಿಸಲು ಅಶೋಕ್ ನರಸೀಪುರಕ್ಕೆ ಬಂದಿದ್ದಾರೆಯೇ? ಎಂದು ಲಕ್ಷ್ಮಣ್ ಪ್ರಶ್ನಿಸಿದರು.
2028ರ ಚುನಾವಣೆ ಗೆಲ್ಲಲು 2026ರಿಂದಲೇ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಶೂದ್ರರು, ದಲಿತರು ಬಿಜೆಪಿ ನಾಯಕರ ಮಾತಿಗೆ ಬಲಿಪಶುಗಳಾಗಬೇಡಿ. ಹಿಂದೂಗಳನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರ? ಎಂದರು.
2018ರಿಂದ 2023ರವರೆಗೆ 188 ಮೇಜರ್ ಕಮ್ಯುನಲ್, ಸಾಮಾನ್ಯ 928 ಪ್ರಕರಣಗಳು ದಾಖಲಾಗಿವೆ. 2023ರಿಂದ ಇಲ್ಲಿಯವರೆಗೆ 7 ಮೇಜರ್, 17 ಸಾಮಾನ್ಯ ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಗೆ ಆಕ್ಷೇಪ ವ್ಯಕ್ತಪಡಿಸಿದ ಎಂ. ಲಕ್ಷ್ಮಣ್, ಬಿಜೆಪಿ ನಾಯಕರ ಮೇಲೆ ಯಾಕೆದಾಳಿ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.
ದಲಿತರನ್ನು ಕಂಡರೆ ಬಿಜೆಪಿ ನಾಯಕರಿಗೆ ಆಗುವುದಿಲ್ಲ. ಕಂದಾಯ, ಲೋಕೋಪಯೋಗಿ, ಗೃಹ ಖಾತೆಗಳನ್ನು ಹೊಂದಿರುವುದನ್ನು ಸಹಿಸದೇ ತಿರುಗಿ ಬಿದ್ದಿದ್ದಾರೆ. ಇನ್ನೂ ಮೂವರ ಮೇಲೆ ದಾಳಿ ನಡೆಯುವ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಎಂ.ಶಿವಣ್ಣ, ಬಿ.ಎಂ.ರಾಮು, ದ್ಯಾವಪ್ಪ ನಾಯಕ, ಮಾಧ್ಯಮ ವಕ್ತಾರ ಎಂ.ಮಹೇಶ್ ಉಪಸ್ಥಿತರಿದ್ದರು.






