ಸರಕಾರವನ್ನು ಪ್ರಶ್ನಿಸುವವರಿಗೆ ದೇಶದ್ರೋಹದ ಪಟ್ಟ : ಶಿವಸುಂದರ್
‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣಾ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ’ ಮುಕ್ತ ಸಂವಾದ

ಮೈಸೂರು : ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಕೃತ್ಯ ಸರಕಾರದ ಭದ್ರತಾ ಲೋಪದ ಪರಿಣಾಮವಾಗಿದ್ದು, ಇದನ್ನು ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಇದು ಪ್ರಜಾಪ್ರಭುತ್ವವೇ ಎಂದು ಚಿಂತಕ ಶಿವಸುಂದರ್ ಪ್ರಶ್ನಿಸಿದ್ದಾರೆ.
ಮಾನಸ ಗಂಗೋತ್ರಿಯ ದಲಿತ ವಿದ್ಯಾರ್ಥಿ ಒಕ್ಕೂಟ, ಎಚ್ಎಂಸಿಬಿ ಯೂನಿಟಿ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನಡೆದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣಾ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ’ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2008ರಲ್ಲಿ ಮುಂಬೈ ದಾಳಿ ಕುರಿತು ಆಗಿನ ವಿರೋಧ ಪಕ್ಷ ಬಿಜೆಪಿ, ಅಸಮರ್ಥ ಕಾಂಗ್ರೆಸ್ ಸರಕಾರವನ್ನು ಸೋಲಿಸಿ ಬಿಜೆಪಿಗೆ ಮತ ಕೊಡಿ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಭದ್ರತಾ ವೈಫಲ್ಯ ಪ್ರಶ್ನಿಸಿ ಹೋರಾಟ ನಡೆಸಿದ ಪರಿಣಾಮ ಅಂದಿನ ಗೃಹ ಸಚಿವ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಜೀನಾಮೆ ನೀಡಿದ್ದರು. ಆದರೆ, ಇತ್ತೀಚೆಗೆ ಪಹಲ್ಗಾಮ್ನಲ್ಲಿನ ಭದ್ರತಾ ವೈಫ್ಯಲವನ್ನು ಪ್ರಶ್ನಿಸಿದರೆ ದೇಶದ್ರೋಹ ಪಟ್ಟ ಕಟ್ಟಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಹರಡುವ ಸುಳ್ಳುಗಳನ್ನು ಕೆದಕಿ ಬರೆಯುವ ಪತ್ರಕರ್ತರು, ಬುದ್ದಿಜೀವಿಗಳು ಭಯೋತ್ಪಾದನೆ ವಿಷಯದಲ್ಲಿ ಸರಕಾರ ಹೇಳಿದ್ದನ್ನೆಲ್ಲ ನಂಬುತ್ತಿರುವುದು ಏಕೆ?. ಸರಕಾರ ಹೇಳಿದ್ದನ್ನೆ ಸತ್ಯವೆನ್ನುವುದು ಪ್ರಜಾಪ್ರಭುತ್ವವಲ್ಲ. ಸರಕಾರ ಹೇಳುತ್ತಿರುವುದು ಸತ್ಯವೇ ಅಥವಾ ಸುಳ್ಳೇ ಎಂದು ಪ್ರಶ್ನಿಸುವುದು ಪ್ರಜಾಪ್ರಭುತ್ವ. ಹೀಗಾಗಿ ವಿದ್ಯಾರ್ಥಿಗಳು, ನಾಗರಿಕರು, ವಿರೋಧ ಪಕ್ಷಗಳು ಪ್ರಶ್ನಿಸಬೇಕು ಎಂದು ಹೇಳಿದರು.
ಪ್ರಶ್ನಿಸುವ ಹಕ್ಕಿನ ಮಾನದಂಡದ ಮೇಲೆ ದೇಶದಲ್ಲಿನ ಪ್ರಜಾಪ್ರಭುತ್ವ ನಿರ್ಧಾರವಾಗಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಕೆ ಮುಖ್ಯವಾಗಲಿದೆ. ಆದರೆ, ಸರಕಾರವನ್ನು ಪ್ರಶ್ನಿಸಿದ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಸಂಬಂಧಿಗಳು, ನಾಗರಿಕರ ಹಕ್ಕುಗಳ ಹೋರಾಟಗಾರರಾದ 16 ಮಂದಿ ಐದು ವರ್ಷದಿಂದ ಜೈಲಿನಲ್ಲಿದ್ದಾರೆ. ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ಗೆ ಜಾಮೀನು ಸಿಗುತ್ತಿಲ್ಲ. ಈ ಸ್ಥಿತಿಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ಜೀವಂತಿಕೆಯ ಪ್ರಶ್ನಿಸಿ ಪ್ರಜಾಪ್ರಭುತ್ವದ ಆಶಯದ ಬಗ್ಗೆ ಮಾತನಾಡಬೇಕು ಎಂದರು.
ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೃಷ್ಣ ಹೊಂಬಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾರುಕೋಲು ಪತ್ರಿಕೆ ಸಂಪಾದಕ ಬಿ.ಆರ್.ರಂಗಸ್ವಾಮಿ ಮುಖ್ಯಭಾಷಣ ಮಾಡಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ವಿಜಯ ಐಎಎಸ್ ಅಕಾಡಮಿ ಮುಖ್ಯಸ್ಥ ಅನಂತರಾಜ್ ಸೂರ್ಯ, ಮಾಲವಿಕಾ ಗುಬ್ಬಿವಾಣಿ, ದಲಿತ ವಿದ್ಯಾರ್ಥಿ ಒಕ್ಕೂಟದ ರವಿ, ರಂಗಯ್ಯ, ಮಹೇಶ್ಕುಮಾರ್, ನವೀನ್, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳು ದಾರಿ ತಪ್ಪಿವೆ. ಲಂಚಮುಕ್ತ, ದೋಷ ಮುಕ್ತ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಯುವಜನರು ಹೋರಾಟ ಮಾಡಬೇಕಿದೆ.
-ಮುಖ್ಯಮಂತ್ರಿ ಚಂದ್ರು, ಹಿರಿಯ ನಟ.
ಪ್ರಜಾಪ್ರಭುತ್ವದ ಬೇರು ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಪ್ರಜಾಪ್ರಭುತ್ವವನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಅಯೋಗ್ಯರು, ಭ್ರಷ್ಟರು, ಕ್ರೂರಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತ. ಈ ವ್ಯವಸ್ಥೆಯನ್ನು ಯುವಜನರು ಬದಲಿಸಬೇಕು.
-ರಂಗಸ್ವಾಮಿ, ಪತ್ರಕರ್ತ, ವಕೀಲ
ಯುದ್ಧ ಎಂದಿಗೂ ಯಾವ ಪರಿಹಾರವನ್ನೂ ತಂದಿಲ್ಲ. ಗಡಿಯಲ್ಲಿ ಯುದ್ಧ ನಡೆದರೆ ದೇಶದೊಳಗೆ ಜನರ ಬದುಕು ಹಾಳಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹೊರ ದೇಶಗಳಲ್ಲಿ ನಮ್ಮದು ಬುದ್ಧ ದೇಶ ಎನ್ನುತ್ತಾರೆ. ಆದರೆ, ಭಾರತಕ್ಕೆ ಬಂದ ತಕ್ಷಣ ಮಾತನಾಡುವುದು ಸಾವರ್ಕರ್ ದೇಶದ ಬಗ್ಗೆ.
- ಶಿವಸುಂದರ್, ಚಿಂತಕ