ಹಿಂದುತ್ವದ ಹೆಸರಿನಲ್ಲಿ ಸಂವಿಧಾನದ ಧ್ವನಿ ಅಡಗಿಸುವ ಕೆಲಸ ಮಾಡಿದರೆ ನಾವು ಸುಮ್ಮನಿರಲ್ಲ: ಜ್ಞಾನಪ್ರಕಾಶ್ ಸ್ವಾಮಿ ಎಚ್ಚರಿಕೆ
ಟಿ. ನರಸೀಪುರದಲ್ಲಿ ʼಸೌಹಾರ್ದತೆ ಕಡೆಗೆ-ಸಾಮರಸ್ಯದ ನಡಿಗೆʼ

ಮೈಸೂರು/ಟಿ.ನರಸೀಪುರ: ಟಿ.ನರಸೀಪುರದಲ್ಲಿ ಗಣೇಶನ ಮೆರವಣಿಗೆ ವಿಚಾರಕ್ಕೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ʼಸೌಹಾರ್ದತೆ ಕಡೆಗೆ-ಸಾಮರಸ್ಯದ ನಡಿಗೆʼ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ಭಗವಾನ್ ಚಿತ್ರ ಮಂದಿರದಲ್ಲಿ ಶುಕ್ರವಾರ ಜಮಾವಣೆಗೊಂಡ ದಲಿತ, ಪ್ರಗತಿಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು ಸೌಹಾರ್ದತೆ ಕಡೆಗೆ-ಸಾಮರಸ್ಯದ ನಡಿಗೆ ಎಂಬ ಘೋಷಣೆಯೊಂದಿಗೆ ಬೃಹತ್ ಮೆರವಣಿಗೆ ಮೂಲಕ ಸಾಗಿ ತಾಲೂಕು ಕಚೇರಿ ತಲುಪಿದರು.
ಇದೇ ವೇಳೆ ಮೈಸೂರು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಕೋಮುವಾದಿಗಳು ಗಲಾಟೆ ಎಬ್ಬಿಸುವುದು, ಸಾಮರಸ್ಯ ಹಾಳುಮಾಡುವುದು ಸಂವಿಧಾನ ಬಾಹಿರ ಕೃತ್ಯ. ಟಿ. ನರಸೀಪುರ ಸರ್ವಜನಾಂಗದ ಶಾಂತಿಯ ತೋಟ, ಕೋಮುವಾದಿಗಳು ಇಲ್ಲಿಗೆ ಬರುವುದು ಸ್ಟೇಷನ್ ಗೆ ನುಗ್ಗುತ್ತೇನೆ ಎನ್ನುವುದು ಒಬ್ಬ ಅಧಿಕಾರಿಯನ್ನು ಗುರಿ ಮಾಡುವುದು ಸಂವಿಧಾನ ಬಾಹಿರ ನಡೆ. ಇಂತಹ ಸಂವಿಧಾನ ವಿರೋಧಿ ಕೃತ್ಯ ಜಾತಿ, ಧರ್ಮದ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿದೆ. ಭಕ್ತಿಯಿಂದ ಮಾಡಬೇಕಿದ್ದ ಗಣಪತಿ ಹಬ್ಬವನ್ನು ಬೆಂಕಿ ಹಚ್ಚುವ ಕೆಲಸಕ್ಕೆ ಕೈ ಹಾಕಿರುವುದು ಸಂವಿಧಾನ ಮತ್ತು ತಿ.ನರಸೀಪುರಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ನಾವು ಹಿಂದೂಗಳು ಎಂದ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದಾಗ ಇವರು ಖಂಡಿಸಬೇಕಿತ್ತಲ್ಲವೆ? ನಾವೆಲ್ಲ ಶ್ರೇಷ್ಠರು, ಕನಿಷ್ಠರು ಎಂದ ಮೇಲೆ ಹೇಗೆ ರಾಷ್ಟ್ರ ಪ್ರೇಮಿಗಳಾಗುತ್ತಾರೆ. ಭಾರತದ ಸಂವಿಧಾನ ಎಂದರೆ ಭಾರತೀಯರ ಧ್ವನಿ, ಅಂತ ಧ್ವನಿಯನ್ನು ನೀವು ಅಡಗಿಸುವ ಕೆಲಸ ಮಾಡಿದರೆ ನಾವುಗಳು ಯಾರೂ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಒಂದು ಸಣ್ಣ ವಿಚಾರವನ್ನು ದೊಡ್ಡದು ಮಾಡಿಕೊಂಡು ಕೋಮುವಾದಿಗಳು ಅಶಾಂತಿಯನ್ನು ಉಂಟು ಮಾಡಲು ಯತ್ನಿಸಿದ್ದಾರೆ. ಅವರ ನಡವಳಿಕೆ ವಿರೋಧಿಸಿ ಇಂದು ಸಾಮರಸ್ಯ ನಡಿಗೆ ಮಾಡಿದ್ದೇವೆ. ಗಣಪತಿ ವಿಸರ್ಜನೆ ವೇಳೆ ಅಶಾಂತಿಗೆ ಕಾರಣರಾದರೆ ನಾವು ಕ್ರಾಂತಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇಂದು ಟಿ.ನರಸೀಪುರದಲ್ಲಿ ಬೆಳಿಗ್ಗೆ ದಲಿತರ ಸಾಮರಸ್ಯ ಯಾತ್ರೆ, ಸಂಜೆ ಹಿಂದೂ ಮಹಾಸಭಾದ ಶೋಭಯಾತ್ರೆ ನಡೆಯುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡೂ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ದಕ್ಷಿಣ ವಲಯ ಪ್ರಭಾರ ಐಜಿಪಿ ವಿಷ್ಣುವರ್ಧನ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎಎಸ್ಪಿ ಎನ್.ಮಲ್ಲಿಕ್, ಡಿವೈಎಸ್ಪಿ ಗಳಾದ ಧರ್ಮೇಂದ್ರ, ಶ್ರೀಕಾಂತ್ ಹೆಚ್ಚಿನ ನಿಗಾವಹಿಸಿದ್ದಾರೆ.
ಸಾಮರಸ್ಯ ನಡಿಗೆಯಲ್ಲಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಧ್ಯಕ್ಷ ಎನ್.ಭಾಸ್ಕರ್, ದಸಂಸ ಜಿಲ್ಲಾ ಸಂಚಾಲಕರಾದ ಚೋರನಹಳ್ಳಿ ಶಿವಣ್ಣ, ಆಲಗೂಡು ಶಿವಕುಮಾರ್, ಬನ್ನಹಳ್ಳಿ ಸೋಮಣ್ಣ, ಎಡದೊರೆಹದೇವಯ್ಯ, ಉಮಾಮಹದೇವ್, ಚುಂಚನಹಳ್ಳಿ ಮಲ್ಲೇಶ್, ಜನಸಂಗ್ರಾಮ ಪರಿಷತ್ ರಾಜ್ಯ ಗೌರವಾಧ್ಯಕ್ಷ ನಗರ್ಲೆ ವಿಜಯಕುಮಾರ್, ಕುಕ್ಕೂರು ರಾಜು, ಶಿವಕುಮಾರ್ ಉರಫ್ ಬಡ್ಡು,ಪ್ರಭುಸ್ವಾಮಿ, ಕುಕ್ಕೂರು ಗಣೇಶ್, ಸೋಸಲೆ ಪರಶಿವ, ಮಹದೇವಸ್ವಾಮಿ, ದೊಡ್ಡಬಾಗಿಲು ಮಲ್ಲಿಕಾರ್ಜುನಸ್ವಾಮಿ, ಉಕ್ಕಲೆಗೆರೆ ಬಸವಣ್ಣ, ವ್ಯಾಸರಾಜಪುರ ಸ್ವಾಮಿ, ಸಿದ್ಧನಹುಂಡಿ ಮಲ್ಲೇಶ್, ಸೋಸಲೆ ಪರಶಿವ, ಕುರುಬರ ಸಂಘದ ಅಧ್ಯಕ್ಷ ಮಹೇಶ್, ಕೊಳತ್ತೂರು ಕುಮಾರ್, ಕೊತ್ತೆಗಾಲ ಬಸವರಾಜು, ದಂಸಂಸ ಚಂದ್ರಶೇಖರ್, ಶಿವಕುಮಾರ್, ವಕೀಲರಾದ ಕಾಂತರಾಜು, ತಿಮ್ಮಯ್ಯ, ಪ್ರೇಮ್, ಕಾಂಗ್ರೆಸ್ ಮುಖಂಡ ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.






