ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅಪಾರ ಗೌರವವಿದೆ : ಯತೀಂದ್ರ ಸಿದ್ದರಾಮಯ್ಯ
"ರಾಜಕೀಯಕ್ಕಾಗಿ ನನ್ನ ಹೇಳಿಕೆ ತಿರುಚುತ್ತಿರುವ ವಿಪಕ್ಷ"

ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು : ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಬಗ್ಗೆ ದುರುದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನಮಗೆ ಸ್ಪೂರ್ತಿ, ಅವರ ಬಗ್ಗೆ ನನಗೆ ಅಪಾರ ಗೌರವ ಅಭಿಮಾನ ಇದೆ. ಅವರ ಹೆಸರಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಅವರ ಬಗ್ಗೆ ಮಾತನಾಡಿದ್ದೇನೆ. ಅವರ ಕೆಲಸ ಕೊಡುಗೆಗಳನ್ನು ಗೌಣ ಮಾಡಬೇಕು ಎಂದು ನಾನು ಹೇಳಿಲ್ಲ. ಅವರ ಕನಸಿನ ರೀತಿ ಮೈಸೂರನ್ನು ಸಿಎಂ ಸಿದ್ಧರಾಮಯ್ಯ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮೈಸೂರು ಅಭಿವೃದ್ಧಿಗೆ 2.500 ಕೋಟಿ ರೂ. ಗಿಂತಲೂ ಹೆಚ್ಚು ಅನುದಾನವನ್ನು ಸಿದ್ಧರಾಮಯ್ಯ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಯಾವ ಮುಖ್ಯಮಂತ್ರಿಯೂ ಇಷ್ಟೊಂದು ಅನುದಾನವನ್ನು ಮೈಸೂರಿಗೆ ನೀಡಿಲ್ಲ. ಇದೊಂದು ಇತಿಹಾಸ. ಹಾಗಾಗಿ ಸಿದ್ಧರಾಮಯ್ಯ ಮೈಸೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಹೇಳಿದ್ದೇನೆಯೇ ಹೊರತು ಬೇರೆ ಅರ್ಥದಲ್ಲಿ ಹೇಳಿಲ್ಲ ಎಂದರು.
ವಿರೋಧ ಪಕ್ಷಗಳಿಗೆ ರಾಜಕೀಯ ಮಾಡಲು ಬೇರೆ ವಿಷಯಗಳಿಲ್ಲ. ಹಾಗಾಗಿ ನನ್ನ ಹೇಳಿಕೆಯನ್ನು ತಿರುಚಿ ವಿವಾದ ಮಾಡುತ್ತಿದ್ದಾರೆ. ಮೈಸೂರು ಅಭಿವೃದ್ಧಿಗೆ ಸಿದ್ಧರಾಮಯ್ಯ ಅವರು ನೀಡಿರುವಷ್ಟು ಅನುದಾನವನ್ನು ಯಾರಾದರೂ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.







