Haryana | ದೀಪಕ್ ನಂದಾಲ್ ಗ್ಯಾಂಗ್ ಗೆ ಸೇರಿದ ನಾಲ್ವರು ಗ್ಯಾಂಗ್ಸ್ಟರ್ಗಳನ್ನು ಎನ್ಕೌಂಟರ್ ನಲ್ಲಿ ಹತ್ಯೆ ನಡೆಸಿದ ಪೊಲೀಸರು

Photo credit: X/@iAtulKrishan1
ಗುರುಗ್ರಾಮ: ಹರ್ಯಾಣದಲ್ಲಿ ದೀಪಕ್ ನಂದಾಲ್ ಗ್ಯಾಂಗ್ ಸೇರಿದ ನಾಲ್ವರು ದರೋಡೆಕೋರರು ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ. ಗುರುಗ್ರಾಮದ ಸುಶಾಂತ್ ಲೋಕ್ ಹಂತ-2ರಲ್ಲಿ ಈ ಘಟನೆ ನಡೆದಿದೆ ಎಂದು Times of India ವರದಿ ಮಾಡಿದೆ.
ಇದು ಹರ್ಯಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಎನ್ಕೌಂಟರ್ ಎಂದು ಹೇಳಲಾಗಿದೆ.
ಘಟನೆಯಲ್ಲಿ ನಾಲ್ವರು ಶೂಟರ್ಗಳು ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಗುಂಡಿನ ಚಕಮಕಿಯ ವೇಳೆ ಮೂವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಎನ್ಕೌಂಟರ್ ವೇಳೆ ಒಟ್ಟು 60ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ. ಆರೋಪಿಗಳು ಸುಮಾರು 40 ಸುತ್ತು ಗುಂಡು ಹಾರಿಸಿದ್ದಾರೆ.
36 ವರ್ಷದ ಉದ್ಯಮಿಗೆ ಕೋಟ್ಯಾಂತರ ರೂ ಹಣ ನೀಡುವಂತೆ ದೀಪಕ್ ನಂದಾಲ್ ಗ್ಯಾಂಗ್ ಬೆದರಿಕೆ ಹಾಕಿತ್ತು. ಬೆದರಿಕೆ ಬಗ್ಗೆ ಮಾಹಿತಿ ಮೇರೆಗೆ ಪೊಲೀಸ್ ತಂಡಗಳು ಸ್ಥಳಕ್ಕೆ ತೆರಳಿದ ವೇಳೆ ಉದ್ಯಮಿಯ ನಿವಾಸದ ಮೇಲೆ ಗುಂಡಿನ ದಾಳಿ ನಡೆಯುತ್ತಿತ್ತು.
ಕಪ್ಪು ಬಣ್ಣದ ಸ್ಕಾರ್ಪಿಯೊ ಎಸ್ಯುವಿಯಲ್ಲಿ ಬಂದ ದರೋಡೆಕೋರರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದರು. ಇದರಿಂದ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಬಳಸಿದ್ದ ಸ್ಕಾರ್ಪಿಯೊ ವಾಹನವನ್ನು ರೋಹ್ಟಕ್ನಿಂದ ಬಾಡಿಗೆಗೆ ಪಡೆಯಲಾಗಿತ್ತು. ಗುಂಡಿನ ಚಕಮಕಿಯ ವೇಳೆ ಐವರು ಶೂಟರ್ಗಳಿಗೂ ಗುಂಡೇಟಿನ ಗಾಯಗಳಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ನಾಲ್ವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಐದನೇ ಆರೋಪಿಯ ಸ್ಥಿತಿ ಗಂಭೀರವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ ಮೂವರು ಅಪರಾಧ ವಿಭಾಗದ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಉದ್ಯಮಿ, ಅವರ ಪತ್ನಿ ಮತ್ತು ಮನೆಕೆಲಸಗಾರರು ಮನೆಯೊಳಗೆ ಇದ್ದರು. ಆದರೆ ಮನೆಯಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.






