Madhya Pradesh | ವಾರೆಂಟ್ ನೀಡುವ ನೆಪದಲ್ಲಿ ಉದ್ಯಮಿಯ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಐವರು ಪೊಲೀಸರು ಅಮಾನತು

Photo Credit : NDTV
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ವಾರೆಂಟ್ ಜಾರಿ ಮಾಡುವ ನೆಪದಲ್ಲಿ ಉದ್ಯಮಿಯೋರ್ವರ ಮನೆಗೆ ನುಗ್ಗಿದ ಪೊಲೀಸರು ಮನೆಮಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಇದೀಗ ಈ ಆರೋಪಕ್ಕೆ ಸಂಬಂಧಿಸಿ ಕನಿಷ್ಠ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಎಪ್ರಿಲ್ 1ರಂದು ರಾತ್ರಿ ಈ ಘಟನೆ ನಡೆದಿದೆ. ಐದರಿಂದ 6 ಮಂದಿ ಪೊಲೀಸರು ಮನೆಯೊಂದಕ್ಕೆ ಬಲವಂತವಾಗಿ ನುಗ್ಗಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ಬಂದಿದೆ. ಈ ಕುರಿತು ಇಲಾಖಾ ತನಿಖೆಗೆ ಚಾಲನೆ ನೀಡಲಾಗಿದ್ದು, ನಂತರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಪ್ರಸ್ತುತ ವಿಜಯನಗರ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿಯ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಕುಮಾರ್ ಪ್ರತೀಕ್ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ನಿವೃತ್ತ ಎಸಿಪಿ ರಾಕೇಶ್ ಗುಪ್ತಾ ಅವರೊಂದಿಗಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ಗೌರವ್ ಜೈನ್ ಎಂಬಾತನಿಗೆ ವಾರಂಟ್ ನೀಡಲು ಪೊಲೀಸರು ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ.
ಮನೆಯಲ್ಲಿದ್ದ ಸುಮಾರು 233 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಪೊಲೀಸರು ಕಳ್ಳತನ ಮಾಡಿದ್ದಾರೆ ಎಂದು ಮನೆ ಮಾಲಕರು ಆರೋಪಿಸಿದ್ದಾರೆ.




