ವಿಕಸಿತ ಭಾರತಕ್ಕೆ 7 ಆದ್ಯತೆ: ‘ಶಕ್ತಿ ಕಿ ಸಪ್ತಧಾರ’ ಘೋಷಿಸಿದ ಮೋದಿ

photo: screengrab/x.com/Indian_Analyzer
ಹೊಸದಿಲ್ಲಿ, ಆ.15: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವ ‘ವಿಕಸಿತ ಭಾರತ’ ಗುರಿ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಳು ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸುಧಾರಣಾ ಕಾರ್ಯಸೂಚಿಯನ್ನು ಶನಿವಾರ ಪ್ರಕಟಿಸಿದರು. ‘ಶಕ್ತಿ ಕಿ ಸಪ್ತಧಾರ’ ಎಂದು ಕರೆಯಲಾದ ಈ ಏಳು ಅಂಶಗಳು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ ಎಂದು ಅವರು ಹೇಳಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಇತಿಹಾಸದಲ್ಲಿನ ‘ಸಪ್ತ ಸಿಂಧು’ ಉಲ್ಲೇಖವನ್ನು ಮಾಡಿದರು. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ದೇಶದಲ್ಲಿ ಅಭಿವೃದ್ಧಿಯ ‘ಹೊಸ ಪ್ರವಾಹ’ ಹರಿಯಬೇಕು ಎಂದರು.
‘ಇಂದು ಕೆಂಪುಕೋಟೆಯಿಂದ ರಾಷ್ಟ್ರದ ಮುಂದೆ ಶಕ್ತಿಯ ಸಪ್ತಧಾರವನ್ನು ಇರಿಸುತ್ತಿದ್ದೇನೆ. ಕಳೆದ ಐದರಿಂದ ಏಳು ದಶಕಗಳಲ್ಲಿ ಸಾಧಿಸಲಾಗದಿದ್ದುದನ್ನು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಈ ಏಳು ಶಕ್ತಿಗಳ ಮೂಲಕ ಸಾಧಿಸುತ್ತೇವೆ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಅಭಿವೃದ್ಧಿಗೆ ಹೊಸ ವೇಗ ನೀಡಲು ಮತ್ತು ಹೊಸ ಗುರಿಗಳನ್ನು ತಲುಪಲು ಇದು ನೆರವಾಗಲಿದೆ’ ಎಂದು ಅವರು ಹೇಳಿದರು.
ದೇಶದ ಯುವಕರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಅವರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಪ್ರಧಾನಿ ತಿಳಿಸಿದರು.
1. ಉತ್ಪಾದನೆ
ಭಾರತದಲ್ಲಿ ತಯಾರಾಗುವ ವಸ್ತುಗಳು ಕಡಿಮೆ ವೆಚ್ಚದಲ್ಲಿ, ಉತ್ತಮ ಗುಣಮಟ್ಟದಲ್ಲಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಬೇಕು. ಅವು ಜಾಗತಿಕ ಮಾರುಕಟ್ಟೆಯಲ್ಲಿ ಇತರ ದೇಶಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸುವಂತಿರಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಭಾರತೀಯ ಉತ್ಪನ್ನಗಳು ಪೂರೈಸಬೇಕು ಎಂದು ಮೋದಿ ಹೇಳಿದರು.
2. ಕೃಷಿ, ಆಹಾರ ಸಂಸ್ಕರಣೆ
ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಗಳ ಮಾರುಕಟ್ಟೆಗಳಿಗೆ ಕೊಂಡೊಯ್ಯಬೇಕು. ಕೃಷಿ ಹಾಗೂ ಆಹಾರ ಉತ್ಪನ್ನಗಳನ್ನು ಜಗತ್ತಿನಾದ್ಯಂತ ಗುರುತಿಸಲ್ಪಡುವ ಬ್ರ್ಯಾಂಡ್ಗಳಾಗಿ ರೂಪಿಸಬೇಕು ಎಂದು ಪ್ರಧಾನಿ ಹೇಳಿದರು.
3. ತಂತ್ರಜ್ಞಾನ, ಹೊಸ ಆವಿಷ್ಕಾರ
ಡಿಜಿಟಲ್ ಮತ್ತು ಸಂವಹನ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಹೊಸದಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಮುಂದಿನ ಹಂತದ ದೇಶದ ಅಭಿವೃದ್ಧಿಯನ್ನು ಮುನ್ನಡೆಸಲು ಇದು ಅಗತ್ಯ ಎಂದು ಮೋದಿ ಹೇಳಿದರು.
4. ಗತಿ ಶಕ್ತಿ
ಜನರು ಮತ್ತು ಸರಕುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವೇಗವಾಗಿ ಹಾಗೂ ಸುಲಭವಾಗಿ ತಲುಪುವ ವ್ಯವಸ್ಥೆ ನಿರ್ಮಿಸುವುದು ಇದರ ಉದ್ದೇಶ. ವೇಗದ ಸಾರಿಗೆ ವ್ಯವಸ್ಥೆ ಮತ್ತು ಉತ್ತಮ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದರು.
5. ರಕ್ಷಾ ಶಕ್ತಿ
ರಕ್ಷಣಾ ಕ್ಷೇತ್ರದಲ್ಲಿ ಭಾರತ ಇತರ ದೇಶಗಳನ್ನು ಅವಲಂಬಿಸದೆ ಸ್ವಾವಲಂಬಿಯಾಗಬೇಕು. ಡ್ರೋನ್ಗಳು ಮತ್ತು ಸೂಪರ್ಸಾನಿಕ್ ತಂತ್ರಜ್ಞಾನ ಸೇರಿದಂತೆ ಹೊಸ ತಲೆಮಾರಿನ ರಕ್ಷಣಾ ತಂತ್ರಜ್ಞಾನಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಬೇಕು ಎಂದು ಮೋದಿ ಹೇಳಿದರು.
6. ಹಸಿರು ಮತ್ತು ಸಾಗರ ಸಂಪನ್ಮೂಲ ಆಧಾರಿತ ಆರ್ಥಿಕತೆ
ಭಾರತದ ನೈಸರ್ಗಿಕ ಸಂಪನ್ಮೂಲಗಳನ್ನು ಆರ್ಥಿಕ ಬೆಳವಣಿಗೆಗೆ ಬಳಸಿಕೊಳ್ಳಬೇಕು. ಅದೇ ಸಮಯದಲ್ಲಿ ಪರಿಸರವನ್ನು ರಕ್ಷಿಸುವ ಮತ್ತು ದೀರ್ಘಕಾಲ ಮುಂದುವರಿಯಬಲ್ಲ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಬೇಕು. ಇದರಿಂದ ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ಹೇಳಿದರು.
7. ಮೃದು ಶಕ್ತಿ
ಯೋಗ, ಆಯುರ್ವೇದ, ಸಮಗ್ರ ಆರೋಗ್ಯ, ಸೃಜನಶೀಲ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ವಿಶ್ವದಾದ್ಯಂತ ಬೆಳೆಸಬೇಕು ಎಂದು ಮೋದಿ ಹೇಳಿದರು.
ಈ ಏಳು ಕ್ಷೇತ್ರಗಳೇ ‘ಶಕ್ತಿ ಕಿ ಸಪ್ತಧಾರ’ದ ಮುಖ್ಯ ಅಂಶಗಳು ಎಂದು ಪ್ರಧಾನಿ ವಿವರಿಸಿದರು. ಈ ಏಳು ಅಂಶಗಳ ಕಾರ್ಯಸೂಚಿಯು ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಅಡಿಪಾಯವಾಗಲಿದೆ. ಭಾರತವನ್ನು ‘ವಿಕ್ಷಿತ್ ಭಾರತ’ವನ್ನಾಗಿ ರೂಪಿಸುವ ಪ್ರಯಾಣಕ್ಕೆ ಇದು ಮತ್ತಷ್ಟು ಬಲ ನೀಡಲಿದೆ ಎಂದು ಅವರು ಹೇಳಿದರು.






