ನೈಜ ಪರಿಸ್ಥಿತಿ ಪರಿಶೀಲಿಸಲು ಎರಡು ದಿನಗಳ ಭೇಟಿಗಾಗಿ ಮಣಿಪುರ ತಲುಪಿದ INDIA ಮೈತ್ರಿಕೂಟದ ನಿಯೋಗ
ಹೊಸದಿಲ್ಲಿ: ಸುಮಾರು ಮೂರು ತಿಂಗಳಿನಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿರುವ ಈಶಾನ್ಯ ರಾಜ್ಯದ ನೈಜ ಪರಿಸ್ಥಿತಿಯನ್ನು ಪರಿಶೀಲಿಸಲು ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳು ಹಾಗೂ ಪರಿಹಾರ ಶಿಬಿರಗಳಿಗೆ ಎರಡು ದಿನಗಳ ಭೇಟಿಗಾಗಿ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ (INDIA) ಮೈತ್ರಿಕೂಟದ ಸಂಸದರ 21 ಸದಸ್ಯರ ನಿಯೋಗ ಶನಿವಾರ ಇಂಫಾಲ್ ತಲುಪಿದೆ.
ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರದ ವಿರುದ್ಧ INDIA ಮೈತ್ರಿಕೂಟ ಮಂಡಿಸಿದ ಅವಿಶ್ವಾಸ ನಿರ್ಣಯದ ಕುರಿತು ಲೋಕಸಭೆಯಲ್ಲಿ ಬಹು ನಿರೀಕ್ಷಿತ ಚರ್ಚೆಗೆ ಮುನ್ನ ಈ ಭೇಟಿ ಕಾರ್ಯ ನಡೆದಿದೆ.
ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಯಂ ಪ್ರೇರಿತ ಹೇಳಿಕೆಗಾಗಿ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ನಿಯೋಗದಲ್ಲಿ 16 ಪಕ್ಷಗಳ ಸಂಸದರಿದ್ದಾರೆ.
ಮಣಿಪುರಕ್ಕೆ ಹೊರಡುವ ಮೊದಲು ನಿಯೋಗದ ಸದಸ್ಯರು ಎರಡು ದಿನಗಳ ಭೇಟಿಯನ್ನು "ಶಾಂತಿ ಮಿಷನ್" ಎಂದು ಕರೆದರು,
''ನಾವು ಮಣಿಪುರದ ಜನರನ್ನು ಭೇಟಿ ಮಾಡಿ ಅವರ ಮಾತುಗಳನ್ನು ಕೇಳುತ್ತೇವೆ. ಮಾನಸಿಕ ಚಿಕಿತ್ಸೆಗೆ ಇದು ಮುಖ್ಯವಾಗಿದೆ ”ಎಂದು ಆರ್ ಜೆಡಿ ಸಂಸದ ಮನೋಜ್ ಝಾ ಅವರು ಭೇಟಿಯ ಮೊದಲು ಪಿಟಿಐಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಪ್ರತಿಪಕ್ಷಗಳ ಒತ್ತಾಯದ ನಂತರ ಕೇಂದ್ರವು ಈಗ ಎಚ್ಚೆತ್ತುಕೊಂಡಿದೆ ಎಂದು ಟೀಕಿಸಿದ್ದಾರೆ.
”ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ… ಇಲ್ಲಿಯವರೆಗೆ, ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಲು ಪ್ರಯತ್ನಿಸಿಲ್ಲ. ಇಂದು, ಪ್ರತಿಪಕ್ಷಗಳ ಪ್ರತಿಭಟನೆಯ ನಂತರ ಕೇಂದ್ರವು ಎಚ್ಚೆತ್ತುಕೊಂಡಿದೆ ”ಎಂದು ಅವರು ಹೇಳಿದರು.