ಅಪಘಾತದಲ್ಲಿ ಮೃತಪಟ್ಟ ಹದಿಹರೆಯದ ಪುತ್ರ ; ಅಂಗಾಂಗಗಳನ್ನು ದಾನ ಮಾಡಿ 6 ಜನರ ಬಾಳಿಗೆ ಬೆಳಕಾದ ಯೋಧ

Photo | NDTV
ಹೊಸದಿಲ್ಲಿ: ಅಪಘಾತದಲ್ಲಿ ಮೃತಪಟ್ಟ ತನ್ನ ಹದಿಹರೆಯದ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸೈನಿಕರೋರ್ವರು ಆರು ಜನರ ಬಾಳಿಗೆ ಬೆಳಕಾಗಿದ್ದಾರೆ.
ಫೆಬ್ರವರಿ 8ರಂದು ಹವಾಲ್ದಾರ್ ನರೇಶ್ ಕುಮಾರ್ ಅವರ ಪುತ್ರ ಹರ್ಷದೀಪ್ ಸಿಂಗ್(18) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಹರ್ಷದೀಪ್ ಸಿಂಗ್ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. ಈ ವೇಳೆ ಹವಾಲ್ದಾರ್ ನರೇಶ್ ಕುಮಾರ್ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಹವಾಲ್ದಾರ್ ನರೇಶ್ ಕುಮಾರ್ ಮಗನ ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ ಮತ್ತು ಕಾರ್ನಿಯಾ ದಾನ ಮಾಡಿದ್ದಾರೆ.
ಫೆಬ್ರವರಿ 16ರಂದು ಹರ್ಷದೀಪ್ ಸಿಂಗ್ ಅವರ ಯಕೃತ್ತು ಮತ್ತು ಮೂತ್ರಪಿಂಡವನ್ನು ಹೊಸದಿಲ್ಲಿಯ ಆರ್ಮಿ ಹಾಸ್ಪಿಟಲ್ ಗೆ ಸಾಗಿಸಲಾಗಿದೆ. ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿಯನ್ನು ಚಂಡೀಗಢದಲ್ಲಿ ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗೆ ನೀಡಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿರುವ ವ್ಯಕ್ತಿಗೆ ಕಾರ್ನಿಯಾಗಳನ್ನು ನೀಡಲು ಸಂರಕ್ಷಿಸಿಡಲಾಗಿದೆ.
ಹವಾಲ್ದಾರ್ ನರೇಶ್ ಕುಮಾರ್ ಅವರ ತ್ಯಾಗ ಸ್ಫೂರ್ತಿಯಾಗಿದೆ. ಅವರ ನಿಸ್ವಾರ್ಥ ಕಾರ್ಯವು ಅಂಗಾಂಗ ದಾನಕ್ಕೆ ಜನರನ್ನು ಪ್ರೇರೇಪಿಸುತ್ತದೆ. ವೈಯಕ್ತಿಕ ನಷ್ಟದ ನಡುವೆಯೂ ಇತರರ ಜೀವನದಲ್ಲಿ ಬೆಳಕಾಗಬಹುದು ಎಂಬುವುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಭಾರತೀಯ ಸೇನೆಯು ತಿಳಿಸಿದೆ.







