ಸತತ ಚುನಾವಣಾ ಹಿನ್ನಡೆ: ಎಐಎಡಿಎಂಕೆ ಪದಾಧಿಕಾರಿ ಆತ್ಮಹತ್ಯೆ

ತಂಜಾವೂರ್: ಸತತ ಹಿನ್ನಡೆಯಿಂದ ಹತಾಶೆಗೊಂಡ 32 ವರ್ಷದ ಎಐಎಡಿಎಂಕೆ ಪದಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಂಜಾವೂರ್ ಜಿಲ್ಲೆಯ ತಿರುಪ್ಪನಂಡಲ್ ಗ್ರಾಮದಲ್ಲಿ ನಡೆದಿದೆ.
ಮೃತ ಪದಾಧಿಕಾರಿಯನ್ನು ಕೆ.ಎ.ಎಸ್.ಮಹೇಂದ್ರನ್ ಎಂದು ಗುರುತಿಸಲಾಗಿದ್ದು, ಅವರು ಪೂರ್ವ ತಂಜಾವೂರ್ ಎಐಎಡಿಎಂಕೆ ವ್ಯಾಪಾರಿ ಘಟಕದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಅವರು ತಮ್ಮ ಪತ್ನಿ ಹಾಗೂ ಒಂದು ವರ್ಷ ವಯಸ್ಸಿನ ಮಗುವನ್ನು ಅಗಲಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ, ಸಾಮಾಜಿಕ ಮಾಧ್ಯಮದಲ್ಲಿ ಸ್ವಯಂ ಚಿತ್ರೀಕರಿಸಿದ ವಿಡಿಯೊವನ್ನು ಬಿಡುಗಡೆ ಮಾಡಿದ್ದ ಮಹೇಂದ್ರನ್, ಇತ್ತೀಚಿನ ಪಕ್ಷದ ಪರಾಭವಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸಂದೇಶದಲ್ಲಿ ಎಐಎಡಿಎಂಕೆಯ ವಿವಿಧ ಬಣಗಳ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷವನ್ನು ಬಲಗೊಳಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಒಗ್ಗಟ್ಟಾಗುವಂತೆ ಕಳಕಳಿಯ ಮನವಿ ಮಾಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪನಂಡಲ್ ನಲ್ಲಿರುವ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.




