ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ನಮ್ಮ ಪಕ್ಷ ಎನ್ಡಿಎ ಜೊತೆಯಲ್ಲೇ ಉಳಿಯಲಿದೆ: ಅಜಿತ್ ಪವಾರ್
![ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ನಮ್ಮ ಪಕ್ಷ ಎನ್ಡಿಎ ಜೊತೆಯಲ್ಲೇ ಉಳಿಯಲಿದೆ: ಅಜಿತ್ ಪವಾರ್ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ನಮ್ಮ ಪಕ್ಷ ಎನ್ಡಿಎ ಜೊತೆಯಲ್ಲೇ ಉಳಿಯಲಿದೆ: ಅಜಿತ್ ಪವಾರ್](https://www.varthabharati.in/h-upload/2024/06/11/1271430-whatsapp-image-2024-06-11-at-14925-pm.webp)
ಅಜಿತ್ ಪವಾರ್ | PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ತಮ್ಮ ಪಕ್ಷ ಎನ್ಡಿಎ ಜೊತೆಯಲ್ಲೇ ಉಳಿಯಲಿದೆ ಎಂದು ಎನ್ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನ ನೀಡುವ ಬಿಜೆಪಿಯ ಪ್ರಸ್ತಾಪವನ್ನು ಸ್ವೀಕರಿಸಲು ಎನ್ಸಿಪಿ ನಿರಾಕರಿಸಿದ್ದು, ಕ್ಯಾಬಿನೆಟ್ ಹುದ್ದೆಯನ್ನು ನಿರೀಕ್ಷಿಸುವುದಾಗಿ ಪಕ್ಷ ಹೇಳಿದೆ. ಪಕ್ಷದ ನಾಯಕ ಪ್ರಫುಲ್ ಪಟೇಲ್ ಕೂಡಾ ಎನ್ಸಿಪಿ ಪಕ್ಷದ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
“ನಾವು ರಾಜ್ಯ ಸಚಿವ ಸ್ಥಾನವನ್ನು ಪಡೆಯಲಿದ್ದೇವೆ ಎಂಬ ಮಾಹಿತಿ ಬಂದಿದೆ. ಆದರೆ ನಾನು ಈಗಾಗಲೇ ಕ್ಯಾಬಿನೆಟ್ ಸಚಿವನಾಗಿದ್ದೆ. ನಮಗೆ ಕ್ಯಾಬಿನೆಟ್ ಸಚಿವ ಸ್ಥಾನವೇ ಬೇಕಿದೆ” ಎಂದು ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ 25ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಎನ್ಸಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವಾರ್, “ಎನ್ಸಿಪಿ ನಾಯಕರು ಎನ್ಡಿಎಯಲ್ಲಿ ನಿರಾಶೆಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ತಪ್ಪು ಸುದ್ದಿಗಳಿವೆ. ಮೋದಿ ಸಂಪುಟದಲ್ಲಿ ಒಂದು ಸಚಿವ ಸಂಪುಟ ಮತ್ತು ಒಬ್ಬ ರಾಜ್ಯ ಸಚಿವ ಸ್ಥಾನಕ್ಕಾಗಿ ನಾವು ಅವರಿಗೆ ಕೇಳಿದ್ದೇವೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ಎನ್ಡಿಎಯಲ್ಲಿ ಹಲವು ಮೈತ್ರಿ ಪಕ್ಷಗಳಿವೆ ಮತ್ತು ಅವೆಲ್ಲವೂ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ನಮಗೆ ತಿಳಿಸಲಾಗಿದೆ. ನಮಗೆ ಒಂದು ರಾಜ್ಯ ಸಚಿವ ಹುದ್ದೆಯನ್ನು ನೀಡಲಾಗಿದೆ, ಅದನ್ನು ನಾವು ನಿರಾಕರಿಸಿದ್ದೇವೆ ಏಕೆಂದರೆ ಪ್ರಫುಲ್ ಪಟೇಲ್ ಹಿಂದಿನ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಅದನ್ನು ನಿರಾಕರಿಸಿದರೆ ನಾವು ಎನ್ಡಿಎಯಲ್ಲಿ ನಿರಾಶೆಗೊಂಡಿದ್ದೇವೆ ಎಂದಲ್ಲ. ನಮಗೆ ಕ್ಯಾಬಿನೆಟ್ ಸ್ಥಾನ ನೀಡಲು ಸಾಧ್ಯವಾಗದಿದ್ದರೂ ನಾವು ಎನ್ಡಿಎ ತೊರೆಯುವುದಿಲ್ಲ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಪವಾರ್ ಹೇಳಿದರು.
ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಪವಾರ್ , ಜುಲೈ ಮಧ್ಯದ ವೇಳೆಗೆ ಪಕ್ಷವು ರಾಜ್ಯಸಭೆಯಲ್ಲಿ ಮೂವರು ಸದಸ್ಯರನ್ನು ಹೊಂದಲಿದೆ ಎಂದು ಭರವಸೆ ನೀಡಿದರು.