ದಲಿತ ವ್ಯಕ್ತಿಗಳಿಗೆ ಥಳಿತ : ಉತ್ತರ ಪ್ರದೇಶ ಬಿಜೆಪಿ ಶಾಸಕನ ಸೋದರ ಪುತ್ರನ ವಿರುದ್ಧ ಪ್ರಕರಣ

ಬಲರಾಮಪುರ: ದಲಿತ ವ್ಯಕ್ತಿಗಳಿಗೆ ಥಳಿಸಿದ್ದಕ್ಕಾಗಿ ಬಿಜೆಪಿಯ ತುಳಸಿಪುರ ಶಾಸಕ ಕೈಲಾಷನಾಥ ಶುಕ್ಲಾ ಅವರ ಸೋದರನ ಪುತ್ರ ಮತ್ತು ಇತರ 11 ಜನರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಸುಮಾರು ಒಂದು ತಿಂಗಳ ಹಿಂದೆ ನಡೆದಿದ್ದ ಘಟನೆಯ ವೀಡಿಯೊ ವೈರಲ್ ಆದ ಬಳಿಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ವೀಡಿಯೊ ತುಣುಕಿನಲ್ಲಿ ಶುಕ್ಲಾರ ಸೋದರನ ಪುತ್ರ ಸೋನು ಶುಕ್ಲಾ ಮತ್ತು ಇತರರು ಕೆಲವು ದಲಿತರನ್ನು ಥಳಿಸುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ ಎಸ್ಪಿ ಕೇಶವ ಕುಮಾರ, ಸೇಖುಲಿಕಲಾನ್ ನಿವಾಸಿ ರಾಕೇಶ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.
ಆದರೆ ಆರೋಪವನ್ನು ತಿರಸ್ಕರಿಸಿರುವ ಶುಕ್ಲಾ, ಕೆಲವರು ತನ್ನ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
‘ಪಾನಮತ್ತರಾಗಿದ್ದ ಕೆಲವರು ನನ್ನ ಸೋದರ ಪುತ್ರನ ಅಂಗಡಿಗೆ ನುಗ್ಗಿ ಕೆಲಸಗಾರರನ್ನು ಥಳಿಸಿದ್ದು,ಈ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ ’ಎಂದು ಅವರು ತಿಳಿಸಿದ್ದಾರೆ.





