ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ಅಣಕಿಸಿರುವುದಕ್ಕೆ ಬಿಜೆಪಿ ಆಕ್ರೋಶ

ಪುಲ್ಕಿತ್ ಮಣಿ ಮತ್ತು ರಾಹುಲ್ ಗಾಂಧಿ (Photo: Free Press Journal)
ಹೊಸದಿಲ್ಲಿ: ಇಂದೋರ್ ನಲ್ಲಿ ನಡೆದ “ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯೊಂದಿಗೆ ವೇದಿಕೆ ಹಂಚಿಕೊಂಡ ಕಾಮೆಡಿಯನ್ ಒಬ್ಬರು ಪ್ರಧಾನಿ ನರೇಂದ್ರ ಮೋದಿಯನ್ನು ಅಣಕಿಸಿರುವುದರ ವಿರುದ್ಧ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, “ಕಾಂಗ್ರೆಸ್ ಹಾಸ್ಯಗಾರರು ಹಾಗೂ ವಿದೂಷಕರ ಪಕ್ಷವಾಗಿ ಬದಲಾಗಿದೆ” ಎಂದು ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಷಿ ಕೂಡಾ ವಾಗ್ದಾಳಿ ನಡೆಸಿದ್ದು, “ರಾಹುಲ್ ಗಾಂಧಿ ಅಕ್ಷರಶಃ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ” ಎಂದು ದೂರಿದ್ದಾರೆ.
“ಪ್ರಧಾನಿ ಮೋದಿಯ ದಿವಂಗತ ತಾಯಿಯನ್ನು ಅಣಕಿಸಲು ವಿದ್ಯಾರ್ಥಿಗಳೊಂದಿಗಿನ ಸಂವಾದವನ್ನು ಅಸ್ತ್ರವನ್ನಾಗಿಸಿಕೊಂಡಿರುವುದು ಆಘಾತಕಾರಿ ಮೂಲಭೂತ ಮಾನವೀಯ ಸಂವೇದನೆ ಹಾಗೂ ರಾಜಕೀಯ ಸಂಸ್ಕೃತಿಯ ಕೊರತೆಯಾಗಿದೆ” ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್ ಪುಲ್ಕಿತ್ ಮಣಿ ಅವರು ಪ್ರಧಾನಿ ಮೋದಿಯನ್ನು ಅಣಕಿಸಿದ ಬೆನ್ನಿಗೇ, ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.






