ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಸಿದ್ದ ಆರೋಪಿ ಮನೆ ಕೆಡವಿದ್ದು ತಪ್ಪು ಎಂದ ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ
ಹೊಸದಿಲ್ಲಿ: ಆದಿವಾಸಿ ವ್ಯಕ್ತಿಯೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಜೈಲು ಪಾಲಾಗಿರುವ ಪ್ರವೇಶ್ ಶುಕ್ಲಾನ ಮನೆ ಧ್ವಂಸ ಮಾಡಿರುವ ಮಧ್ಯಪ್ರದೇಶ ಪೊಲೀಸರ ನಿರ್ಧಾರವನ್ನು ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಟೀಕಿಸಿದ್ದಾರೆ.
“ಆ ಮನೆಯು ಅವರ (ಪ್ರವೇಶ್ ಶುಕ್ಲಾ ಕುಟುಂಬದ) ಪೂರ್ವಜರ ಆಸ್ತಿಯಾಗಿತ್ತು. ಇದು ಅವರ ಅಜ್ಜನ ಕಾಲದಿಂದ ಅವರ ಕುಟುಂಬದ ಮನೆಯಾಗಿತ್ತು. ಇದನ್ನು ಅಧಿಕಾರಿಗಳು ಕೆಡವಬಾರದಿತ್ತು... ಆರೋಪಿ ಯಾರೇ ಆಗಿರಲಿ, ಆತನ ಕುಟುಂಬಕ್ಕೆ ತೊಂದರೆಯಾಗಬಾರದು’’' ಎಂದು ಕೇದಾರನಾಥ್ The Indian Expressಗೆ ತಿಳಿಸಿದರು.
ಪ್ರವೇಶ್ ಬಿಜೆಪಿಗೆ ಅದರಲ್ಲೂ ವಿಶೇಷವಾಗಿ ಸಿದ್ದಿ ಶಾಸಕ ಕೇದಾರನಾಥ್ ಗೆ ನಿಕಟವಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದರಿಂದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
''ಆರೋಪಿಯ ಹೆಸರನ್ನು ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಪ್ರತಿನಿಧಿಯಾಗಿರುವ ಪ್ರವೇಶ್ ಶುಕ್ಲಾ ಎಂದು ಹೇಳಲಾಗುತ್ತಿದೆ. ಹಿರಿಯ ಬಿಜೆಪಿ ನಾಯಕರೊಂದಿಗೆ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆರೋಪಿಯ ಛಾಯಾಚಿತ್ರಗಳಿವೆ’’ ಎಂದು ಕಾಂಗ್ರೆಸ್ ಮುಖಂಡ ಅಬ್ಬಾಸ್ ಹಫೀಝ್ ಘಟನೆಯ ನಂತರ ಟ್ವೀಟ್ ಮಾಡಿದ್ದರು.
ಮೂತ್ರ ವಿಸರ್ಜನೆಯ ಘಟನೆಯ ವಿಡಿಯೋ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತನನ್ನು ಭೇಟಿಯಾಗಿ ಆತನ ಪಾದಗಳನ್ನು ತೊಳೆದರು. ಪೊಲೀಸರು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿ ಆರೋಪಿಯನ್ನು ಬಂಧಿಸಿದರು ಮತ್ತು ಪ್ರವೇಶ್ ವಾಸಿಸುತ್ತಿದ್ದ ಮನೆಯ "ಅಕ್ರಮ" ಭಾಗಗಳನ್ನು ಕೆಡವಿದ್ದರು.