ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ 50 ಶಾಸಕರು, 20 ಸಂಸದರು ಪಕ್ಷಾಂತರಕ್ಕೆ ಸಿದ್ಧರಿದ್ದಾರೆ: ಬಿಜೆಪಿ ಸಂಸದ ಸೌಮಿತ್ರ ಖಾನ್

ಬಿಜೆಪಿ ಸಂಸದ ಸೌಮಿತ್ರ ಖಾನ್ (Photo: X/@KhanSaumitra)
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನ ಸುಮಾರು 50 ಮಂದಿ ಶಾಸಕರು ಹಾಗೂ 20 ಸಂಸದರು ಆಡಳಿತಾರೂಢ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದು, ಪಕ್ಷದ ಕೇಂದ್ರ ನಾಯಕತ್ವ ಅನುಮತಿ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ಹೇಳಿದ್ದಾರೆ. ಈ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ನಾಯಕತ್ವ ತೀರ್ಮಾನಿಸಿದರೆ ತೃಣಮೂಲ ಕಾಂಗ್ರೆಸ್ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಸೌಮಿತ್ರ ಖಾನ್ ಹೇಳಿದರು.
"ಬಿಜೆಪಿ ಕೇಂದ್ರ ನಾಯಕತ್ವ ಒಪ್ಪಿಕೊಂಡರೆ ಸಾಕು, ಟಿಎಂಸಿ ಇನ್ನು ಮುಂದೆ ಪಕ್ಷವಾಗಿ ಉಳಿಯುವುದಿಲ್ಲ. ಎಲ್ಲರೂ ಬರಲು ಸಿದ್ಧರಿದ್ದಾರೆ. ಸುಮಾರು 50 ಶಾಸಕರು ಪಕ್ಷದ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು 20 ಸಂಸದರು ಸೇರಲು ಸಿದ್ಧರಾಗಿದ್ದಾರೆ" ಎಂದು ಅವರು ಹೇಳಿದರು.
ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು "ಪಾಪಿ" ಎಂದು ತೀವ್ರ ವಾಗ್ದಾಳಿ ನಡೆಸಿದ ಸೌಮಿತ್ರ ಖಾನ್, ಪಾಪಿಗಳು ಜೈಲಿಗೆ ಹೋಗಬೇಕು. ಇಂದು ಅವರ ಮನೆಯ ಮುಂದೆ ಬುಲ್ಡೋಝರ್ ನಿಂತಿದೆ. 2021ರಲ್ಲಿ ಅವರು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಕೆಡವಿದರು. ಪಾಪಿಗಳು ತಕ್ಷಣವೇ ಪರಿಣಾಮಗಳನ್ನು ಎದುರಿಸಬೇಕು. ಅವರು ನರಕಕ್ಕೆ ಹೋಗಬೇಕು ಎಂದು ಖಾನ್ ಹೇಳಿದರು.
ಆದರೆ, ಖಾನ್ ಅವರ ಹೇಳಿಕೆಯನ್ನು ತಿರಸ್ಕರಿಸಿದ ತೃಣಮೂಲ ಸಂಸದ ಸೌಗತ ರಾಯ್, ಬಿಜೆಪಿ ನಾಯಕನ ಹೇಳಿಕೆಯಲ್ಲಿ ಯಾವುದೇ ವಾಸ್ತವವಿಲ್ಲ. ಸೌಮಿತ್ರ ಖಾನ್ ಮತ್ತು ಬಿಜೆಪಿ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಇಂತಹದ್ದೇನೂ ಸಂಭವಿಸುವುದಿಲ್ಲ ಎಂದು ಹೇಳಿದರು.






