ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ: ಅನಿಲ್ ಆ್ಯಂಟನಿ ರಾಷ್ಟ್ರೀಯ ಕಾರ್ಯದರ್ಶಿ
ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಷ್ಟ್ರೀಯ ನಾಯಕತ್ವ ಸ್ಥಾನಗಳಲ್ಲಿ ಶನಿವಾರ ಬದಲಾವಣೆ ಮಾಡಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ರಾಷ್ಟ್ರೀಯ ಪದಾಧಿಕಾರಿಗಳ ಹೊಸ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. 13 ಉಪಾಧ್ಯಕ್ಷರು, ಒಂಬತ್ತು ಪ್ರಧಾನ ಕಾರ್ಯದರ್ಶಿಗಳು, ಸಂಘಟನೆಯ ಉಸ್ತುವಾರಿ ಬಿ. ಎಲ್. ಸಂತೋಷ್ ಸೇರಿದಂತೆ 13 ಕಾರ್ಯದರ್ಶಿಗಳು ಪಟ್ಟಿಯಲ್ಲಿದ್ದಾರೆ.
ಕರ್ನಾಟಕದ ನಾಯಕ ಸಿ. ಟಿ. ರವಿ ಹಾಗೂ ಅಸ್ಸಾಂನ ಲೋಕಸಭಾ ಸಂಸದ ದಿಲೀಪ್ ಸೈಕಿಯಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದಲೂ, ಮಾಜಿ ಕೇಂದ್ರ ಸಚಿವ, ಬಿಹಾರದ ಲೋಕಸಭಾ ಸಂಸದ ರಾಧಾ ಮೋಹನ್ ಸಿಂಗ್ ಅವರನ್ನೂ ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಎ. ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟಿನಿ ಅವರನ್ನೂ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅನಿಲ್ ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದರು.
ಎಂಎಲ್ಸಿ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ತೆಲಂಗಾಣ ಬಿಜೆಪಿಯ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಿಜೆಪಿಯ ನೂತನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿ ರಾಜ್ಯಸಭಾ ಸಂಸದ ರಾಧಾಮೋಹನ್ ಅಗರವಾಲ್ ಕೂಡ ಇದ್ದಾರೆ.